ಸಕ್ಕರೆ ಕಾಯಿಲೆ ಅಥವಾ ಶುಗರ್ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಮಧುಮೇಹದಿಂದ ಬಳಲುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಆಹಾರ ಕ್ರಮ, ಜೀವನ ಶೈಲಿ, ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.
ಮಧುಮೇಹದಿಂದ ಬಳಲುತ್ತಿರುವವರು ಹಾಗೂ ಮಧುಮೇಹ ಬಾರದಂತೆ ಯಾವೆಲ್ಲ ಆಹಾರ ಸೇವಿಸಬೇಕು. ಯಾವ ಹಣ್ಣು, ತರಕಾರಿಗಳನ್ನು ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ.
ಮಧ್ಯಾಹ್ನ ನಿದ್ದೆ ಮಾಡುವ ರೂಢಿ ತಪ್ಪಿಸಿ, ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು.
ರಕ್ತದಲ್ಲಿ ಸಕ್ಕರೆ ಮಟ್ಟ ವೃದ್ಧಿಸುವ ಹಣ್ಣುಗಳಾದ ಬಾಳೆಹಣ್ಣು, ಮಾವು, ದ್ರಾಕ್ಷಿಹಣ್ಣುಗಳ ಸೇವನೆ ಮತ್ತು ಈ ಹಣ್ಣುಗಳ ಜ್ಯೂಸ್ಗಳನ್ನು ಹಾಗೂ ಮೈದಾದಿಂದ ಮಾಡುವ ತಿನಿಸುಗಳು, ಪಾಲಿಶ್ ಮಾಡಿದ ಅಕ್ಕಿಯ ಆಹಾರ, ಜೇನುತುಪ್ಪ, ಬೆಲ್ಲವನ್ನು ಸೇವಿಸಬಾರದು.
ನಾರಿನಂಶವುಳ್ಳ ಹಣ್ಣು ತರಕಾರಿಗಳು ಹಾಗೂ ಹಾಗಲಕಾಯಿ, ತೊಂಡೆಕಾಯಿ, ಮೂಲಂಗಿ, ಈರುಳ್ಳಿ, ಟೊಮೆಟೊ, ಸೊಪ್ಪು, ಸೌತೆಕಾಯಿಯನ್ನು ಸೇವಿಸಬಹುದು.
ಉಪ್ಪಿನಕಾಯಿ, ಉಪ್ಪು, ಹುಳಿಯನ್ನು ಮಿತವಾಗಿ ಸೇವಿಸಬಹುದು.
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದುಗಳು
2 ಚಮಚ -ನೆಲ್ಲಿಕಾಯಿ ಪುಡಿ, 2 ಚಮಚ- ಹಾಗಲಕಾಯಿ ಪುಡಿ, 1ಚಮಚ ಮೆಂತೆ ಪುಡಿ, 1 ಚಮಚ– ಕರಿಬೇವಿನ ಪುಡಿ ಹಾಗೂ ಅರ್ಧ ಚಮಚ ಅರಿಶಿಣ ಪುಡಿಯನ್ನು ಸೇರಿಸಿ 1 ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಈ ಮಿಶ್ರಣವನ್ನು ಪ್ರತಿ ದಿನ ಬೆಳಗ್ಗೆ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಈ ಪುಡಿಗಳು ಇಲ್ಲದಿದ್ದರೆ, ಈ ವಸ್ತುಗಳ ಜ್ಯೂಸ್ ಕೂಡ ಮಾಡಿ ಸೇವಿಸಬಹುದು.
ಜೀವನ ಕ್ರಮ
ಡಿಜಿಟಲ್ ಉಪಕರಣಗಳಾದ ಮೊಬೈಲ್ ಫೋನ್, ಟಿವಿ, ಕಂಪ್ಯೂಟರ್ಗಳ ಮುಂದೆ ಹೆಚ್ಚಾಗಿ ಕುಳಿದುಕೊಳ್ಳುವವರು ದೈಹಿಕವಾಗಿಯೂ ಚಲನಶೀಲತೆ ಕಾಪಾಡಿಕೊಳ್ಳಿ
ಪ್ರತಿ ದಿನ 40 ನಿಮಿಷವಾದರೂ ವಾಕಿಂಗ್, 15 ನಿಮಿಷ ಪ್ರಾಣಾಯಾಮ ಜೀವನದ ಭಾಗವಾಗಿಸಿಕೊಳ್ಳಬೇಕು. ಇದರ ಹೊರತಾಗಿ ಯೋಗ, ಸೈಕ್ಲಿಂಗ್, ಜಾಗಿಂಗ್ ಕೂಡ ಮಾಡಬಹುದು.
ಮಧುಮೇಹವನ್ನು ನಿರ್ಲಕ್ಷಿಸಿದಲ್ಲಿ ನರ, ಕಿಡ್ನಿ ಹಾಗೂ ಕಣ್ಣಿನ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.