
ಮಕ್ಕಳು ಬೆಳವಣಿಗೆ ಆಗುತ್ತಿದ್ದಂತೆ ಊಟವನ್ನು ತಿರಸ್ಕರಿಸಲು ಆರಂಭಿಸುತ್ತಾರೆ. ಅವರಲ್ಲಿ ಜೀರ್ಣಶಕ್ತಿ ಉತ್ತೇಜಿಸಲು, ಹಸಿವು ಹೆಚ್ಚಿಸಲು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವು ಮಾಹಿತಿಗಳನ್ನು ನೀಡಿದ್ದಾರೆ.
ಮಕ್ಕಳಲ್ಲಿ ಜೀರ್ಣಶಕ್ತಿ ಉತ್ತೇಜಿಸಲು ಇಲ್ಲಿವೆ ಕೆಲವು ಸಲಹೆಗಳು
ಆರ್ದ್ರಕ ಸ್ವರಸ (ಶುಂಠಿ ರಸ)
ಅರ್ಧ ಚಮಚ ಶುಂಠಿ ರಸದ ಜೊತೆ, ಕಾಲು ಚಮಚ ಜೇನು ತುಪ್ಪ ಮಿಶ್ರಣ ಮಾಡಿಕೊಳ್ಳಿ. ಆ ಮಿಶ್ರಣವನ್ನು ಮಕ್ಕಳಿಗೆ ಊಟಕ್ಕೂ ಮೊದಲು 2ರಿಂದ3 ದಿನ ಕುಡಿಸಬಹುದು.
ಚಿಂಚ ಪಾನಕ (ಹುಣಸೆ ಪಾನಕ)
ಹುಣಸೆಹಣ್ಣನ್ನು ಸ್ವಲ್ಪ ಬಿಸಿ ನೀರಲ್ಲಿ ನೆನೆಸಿ ರಸ ತೆಗೆದುಕೊಳ್ಳಿ. ಆ ರಸದ ಜೊತೆ ಅಗತ್ಯಕ್ಕೆ ತಕ್ಕಷ್ಟು ಬೆಲ್ಲ ಸೇರಿಸಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಕಾಲು ಚಮಚ ಶುಂಠಿ ರಸ, ಚಿಟಿಕೆಯಷ್ಟು ಏಲಕ್ಕಿ ಪುಡಿ, ಸೈಂಧವ ಲವಣ, ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಮಿಶ್ರಣ ಮಾಡಿ ಕುಡಿಯಲು ಕೊಡಿ.
ಊಟ ಮಾಡಲು ಹಠ ಮಾಡವ ಮಕ್ಕಳಿಗೆ ಈ ಚಿಂಚ ಪಾನಕವನ್ನು ನೀಡಬಹುದು.
ಸಿತೋಪಲಾದಿ ಚೂರ್ಣ
ಈ ಔಷಧಿಯು ಎಲ್ಲಾ ಆಯುರ್ವೇದದ ಅಂಗಡಿಗಳಲ್ಲಿ ಲಭ್ಯವಿರುತ್ತದೆ.
ಇದನ್ನು ಬಳಸುವ ವಿಧಾನ
ಕಾಲು ಚಮಚ ಚೂರ್ಣದ ಜೊತೆಗೆ ಅಗತ್ಯಕ್ಕೆ ತಕ್ಕಷ್ಟು ಜೇನು ತುಪ್ಪ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮಕ್ಕಳಿಗೆ ಊಟಕ್ಕೂ ಮೊದಲು 2–3 ದಿನಗಳವರೆಗೆ ಕುಡಿಸಬಹುದು.
ಈ ಔಷಧಿಯನ್ನು ಶೀತ, ಕೆಮ್ಮ ಇರುವ ಮಕ್ಕಳಿಗೂ ನೀಡಬಹುದು.
ಬಜೆ /ವಚಾ
ಬಜೆ /ವಚಾ ಒಂದು ಚಿಟಿಕೆಯಷ್ಟು ಉಗುರು ಬೆಚ್ಚಗಿನ ಬಿಸಿನೀರು ಅಥವಾ ಹಾಲಿನೊಂದಿಗೆ ಬೆರೆಸಿ, ಮಕ್ಕಳಿಗೆ ಊಟಕ್ಕೂ ಮೊದಲು ಒಂದೆರಡು ದಿನ ಕುಡಿಸಬಹುದು. ಇದು ಮಕ್ಕಳ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ಕಾಲು ಚಮಚ ಅಜಮೋದಾದಿ ಚೂರ್ಣ ಅಥವಾ ಅಜ್ವೈನ್ ಪುಡಿಯನ್ನು (Omum / Carom seeds) ಉಗುರು ಬೆಚ್ಚಗಿನ ನೀರು ಅಥವಾ ಮಜ್ಜಿಗೆಗೆ ಮಿಶ್ರಣ ಮಾಡಿ ಮಕ್ಕಳಿಗೆ ದಿನಕ್ಕೆ ಎರಡು ಬಾರಿ ನೀಡಬಹುದು.
ಮಾದಿಫಲ
ಈ ಔಷಧಿಯು ಎಲ್ಲಾ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಅರ್ಧ ಚಮಚ ಮಾದಿಫಲವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಊಟಕ್ಕೂ ಮೊದಲು 2ರಿಂದ5 ವರ್ಷದ ಮಕ್ಕಳಿಗೆ ಕುಡಿಸಬಹುದು.
(ಲೇಖಕರು: ಡಾ.ಪೂರ್ಣಿಮಾ ಎನ್, ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು, ಹುಬ್ಬಳ್ಳಿಯ ಆಯುರ್ವೇದ ಕಾಲೇಜು ಆಸ್ಪತ್ರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.