ADVERTISEMENT

ಕಾಡಿದ ಆ ಕೊನೆಯ ಎಸೆತ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 20:00 IST
Last Updated 29 ಮಾರ್ಚ್ 2019, 20:00 IST
ಪಂದ್ಯವನ್ನು ಆನಂದಿಸಿದ ಆರ್‌ಸಿಬಿ ಅಭಿಮಾನಿಗಳು   ಪ್ರಜಾವಾಣಿ ಚಿತ್ರ/ಪಿ.ಎಸ್‌.ಕೃಷ್ಣಕುಮಾರ್‌
ಪಂದ್ಯವನ್ನು ಆನಂದಿಸಿದ ಆರ್‌ಸಿಬಿ ಅಭಿಮಾನಿಗಳು   ಪ್ರಜಾವಾಣಿ ಚಿತ್ರ/ಪಿ.ಎಸ್‌.ಕೃಷ್ಣಕುಮಾರ್‌   

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ಆರ್‌ಸಿಬಿ...ಆರ್‌ಸಿಬಿ ಕೂಗು ಜೋರಾಗಿತ್ತು. ನಂತರದಲ್ಲಿ ಈ ಕೂಗು ಎಬಿಡಿ..ಎಬಿಡಿ ಎಂದು ಬದಲಾಯಿತು.. ಆದರೆ, ಆ ಕೊನೆಯ ಎಸೆತ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸಿಗೆ ನೀರೆರೆಚಿತು.

ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾದ ಎ.ಬಿ.ಡಿವಿಲಿಯರ್ಸ್‌ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದಾರೆ. ಆರ್‌ಸಿಬಿ ತಂಡದ ಗೆಲುವಿಗೆ ಅವರು ಬುನಾದಿ ಹಾಕಿದ್ದರು. ಜಸ್‌ಪ್ರೀತ್‌ ಬೂಮ್ರಾ ಹಾಕಿದ ಆ ಕೊನೆಯ ಎಸೆತ ‘ನೋ ಬಾಲ್‌’ ಆಗಿದ್ದು ಟಿ.ವಿ. ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಆದರೆ ಅಂಪೈರ್‌ ಮಾತ್ರ ’ನೋ ಬಾಲ್‌‘ ಸಂದೇಶ ಕೊಡಲೇ ಇಲ್ಲ. ಕೊನೆಯ ಎಸೆತದಲ್ಲಿ 7 ರನ್‌ ಬೇಕಿದ್ದ ಆರ್‌ಸಿಬಿ ತಂಡ ಸೋಲಿನ ಸುಳಿಗೆ ಮತ್ತೊಮ್ಮೆ ಸಿಲುಕಿತು.

ಅಭಿಮಾನಿಗಳ ಆಕ್ರೋಶ: ಪಂದ್ಯ ಸೋಲಲು ಕಾರಣವಾದ ‘ಮಿಸ್ಸಿಂಗ್ ನೋ ಬಾಲ್‌‘ ವಿರುದ್ಧ ಅಭಿಮಾನಿಗಳಲ್ಲಿ ಆಕ್ರೋಶವಿತ್ತು. ಗುರುವಾರ ರಾತ್ರಿಯಿಂದಲೇ ಕ್ರಿಕೆಟ್‌ ಆಟಕ್ಕೆ ಕಳಂಕವಾದ ‘ನೋಬಾಲ್‌‘ ಎಂಬ ಸಂದೇಶಗಳು ಹರಿದಾಡುತ್ತಿವೆ. ವಾಟ್ಸ್‌ಆ್ಯಪ್‌, ಟ್ವಿಟರ್, ಇನ್‌ಸ್ಟಾಗ್ರಾಂಗಳಲ್ಲಿ ಆಕ್ರೋಶದ ಅಲೆ ಎದ್ದಿದೆ. ಇದು ‘ನೋ ಬಾಲ್‌ ಅಲ್ವಾ ಹಾಗಾದ್ರೆ’..ಎಂಬ ಅಭಿಯಾನವೇ ಆರಂಭವಾಗಿದೆ.

ADVERTISEMENT

ಚಿನ್ನಸ್ವಾಮಿ ಅಂಗಳದಲ್ಲಿಯೇ ಕೆಲವರು ‘ಮೋಸ, ಮೋಸ, ಮೋಸ’ ಎಂದು ಆಕ್ರೋಶ ತೋರಿದರು. ಪಂದ್ಯ ಮುಗಿದ ಬಳಿಕ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ, ‘ಈ ರೀತಿಯ ಘಟನೆಗಳು ಐಪಿಎಲ್ ಹಾಗೂ ಆಟದ ಗುಣಮಟ್ಟವನ್ನು ಹಾಳುಮಾಡುತ್ತವೆ’ ಎಂಬ ಅಭಿಪ್ರಾಯ ನೀಡಿದ್ದಾರೆ.

‘ಐಪಿಎಲ್‌ ಆಡಳಿತ ಮಂಡಳಿ ‘ನೋ ಬಾಲ್‌’ ವಿವಾದಕ್ಕೆ ಉತ್ತರ ನೀಡಬೇಕು. ನಮ್ಮ ನಿದ್ದೆ ಕೆಡಿಸಿದವರನ್ನು ಸುಮ್ಮನೆ ಬಿಡಬಾರದು. ಇದು ಅನ್ಯಾಯ’ ಎಂದು ಟ್ವಿಟರ್‌ನಲ್ಲಿ ಬಾಲಾಜಿತ್‌ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಫ್ರೀ ಹಿಟ್ ಕಸಿದದ್ದು ಯಾಕೆ?
‘ಕೊನೆಯ ಎಸೆತದಲ್ಲಿ ಫ್ರೀ ಹಿಟ್‌.. ವ್ಹಾ ಎಂತಹ ಅದ್ಭುತ ಕ್ಷಣಕ್ಕೆ ಆರ್‌ಸಿಬಿ ಸಾಕ್ಷಿಯಾಗುತ್ತಿತ್ತು. ಇಂತದ್ದನ್ನು ಕಳೆದು ಕೊಳ್ಳಲು ಯಾವ ಅಭಿಮಾನಿಯೂ ಸಿದ್ಧನಿಲ್ಲ. ಆರ್‌ಸಿಬಿಗೆ ಅವಕಾಶ ಸಿಕ್ಕಿದ್ದರೆ ಖಂಡಿತಾ ಪಂದ್ಯ ಗೆಲ್ಲುತ್ತಿತ್ತು’ ಎಂದು ಟ್ವಿಟರ್‌ನಲ್ಲಿ ಇರ್ಷಾದ್ ಬರೆದುಕೊಂಡಿದ್ದಾರೆ.

‘ಎಬಿಡಿ ಹಾಗೂ ಕೊಹ್ಲಿಯ ಆಟ ನೋಡುವ ಕನಸಿತ್ತು. ಆರ್‌ಸಿಬಿ ಪಂದ್ಯ ಗೆಲ್ಲಲೇಬೇಕು ಎಂಬ ಹುಚ್ಚು ಇರಲಿಲ್ಲ. ಆದರೆ ಕೊನೆಯ ಓವರ್‌ಗಳಲ್ಲಿ ನಮ್ಮ ತಂಡ ಗೆಲ್ಲಬೇಕು ಎಂಬ ತುಡಿತ ಹೆಚ್ಚಾಯಿತು. ಕೊನೆಯ ಎಸೆತದಲ್ಲಿ ಆದ ಮೋಸದಿಂದ ಮನಸ್ಸಿಗೆ ನೋವಾಯಿತು’ ಎಂದು ಕೆಂಗೇರಿಯ ಧನ್‌ರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

‘ಆರ್‌ಸಿಬಿ ಗೆದ್ದಿದ್ದರೆ ಇನ್ನೂ ಸಂತೋಷವಾಗುತ್ತಿತ್ತು. ಎಬಿಡಿ ಆಟ ನೋಡಿದ ಮೇಲೆ ಚಿನ್ನಸ್ವಾಮಿ ಅಂಗಳದ ಗ್ಯಾಲರಿ ಮೇಲಿನ ಪ್ರೀತಿ ಇನ್ನೂ ಹೆಚ್ಚಾಯಿತು.’ ಎನ್ನುತ್ತಾರೆ ನಂದಿನಿ ಲೇಔಟ್‌ನ ಹೇಮಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.