
ಫ್ಯಾಕ್ಟ್ ಚೆಕ್: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?
ಕಾವಿ ಬಟ್ಟೆ ಧರಿಸಿದ ವ್ಯಕ್ತಿಯನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಇದಾಗಿದ್ದು, ಅಲ್ಲಿನ ಹಿಂದೂಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀಫ್ರೇಮ್ಗಳನ್ನು ಪ್ರತ್ಯೇಕಿಸಿ, ಅವುಗಳನ್ನು ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದಾಗ, ಅದು ಇನ್ಸ್ಟಾಗ್ರಾಂನಲ್ಲಿ 2025ರ ಡಿ.1ರಂದು ಅಪ್ಲೋಡ್ ಮಾಡಲಾದ ವಿಡಿಯೊಕ್ಕೆ ಸಂಪರ್ಕ ಕಲ್ಪಿಸಿತು. ‘ಮಕ್ಕಳ ಅಪಹರಣಕಾರ ಬಾಬಾ ಮೂರು ವರ್ಷದ ಮಗುವನ್ನು ಕದ್ದೊಯ್ದಿದ್ದಾರೆ, ಟಂಡ್ ರೈಲು ನಿಲ್ದಾಣ’ ಎಂದು ವಿಡಿಯೊ ಕೆಳಗೆ ಅಡಿಟಿಪ್ಪಣಿ ಇದೆ. ಆ ವಿಡಿಯೊ ಹಂಚಿಕೊಂಡಿರುವ ಬಳಕೆದಾರನೇ ಮತ್ತೊಂದು ವಿಡಿಯೊ ಹಂಚಿಕೊಂಡಿದ್ದು, ಅದರಲ್ಲಿ ಬಾಬಾ ಬಗ್ಗೆ ಪಂಜಾಬಿ ಪತ್ರಕರ್ತರೊಬ್ಬರು ಮಾತನಾಡಿದ್ದಾರೆ. ಹೋಷಿಯಾರ್ಪುರದ ಊರ್ಮರ್ ಟಂಡ್ ರೈಲು ನಿಲ್ದಾಣದಲ್ಲಿ ಬಾಬಾ ಮೂರು ದಿನದ ಹಿಂದೆ ಮಗುವನ್ನು ಅಪಹರಣ ಮಾಡಲು ಯತ್ನಿಸಿದ್ದು, ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದರು ಎಂದು ವಿವರಿಸಿದ್ದಾರೆ. ಇದನ್ನು ಬಾಂಗ್ಲಾದ ವಿಡಿಯೊ ಎಂದು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.