ನವದೆಹಲಿ: ಭಾರತ, ಚೀನಾ ಮತ್ತು ಪಾಕಿಸ್ತಾನ ನಡುವಣ ತ್ರಿರಾಷ್ಟ್ರ ಶೃಂಗಸಭೆ ವಿಚಾರ ಪ್ರಸ್ತಾಪಿಸಿದ್ದ ಚೀನಾ ರಾಯಭಾರಿ ಲುವೊ ಝೊಹುಯ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ, ‘ಭಾರತ–ಪಾಕಿಸ್ತಾನ ಸಂಬಂಧ ಸಂಪೂರ್ಣ ದ್ವಿಪಕ್ಷೀಯವಾಗಿದ್ದು, ಇದರಲ್ಲಿ ಭಾಗವಹಿಸಲು ಮೂರನೇ ರಾಷ್ಟ್ರಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಆತಿಥ್ಯದಲ್ಲಿ ತ್ರಿಪಕ್ಷೀಯ ಸಭೆ ನಡೆಸುವ ಕುರಿತು ಮಾತನಾಡಿದ್ದ ಝೊಹುಯ್, ಭಾರತ – ಪಾಕಿಸ್ತಾನದ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಈ ಪ್ರದೇಶದಲ್ಲಿ ಶಾಂತಿ ಕಾಪಾಡುವ ಸಲುವಾಗಿ ‘ಭವಿಷ್ಯ’ದಲ್ಲಿ ನೆರವಾಗುವುದಾಗಿ ಹೇಳಿದ್ದರು.
ಚೀನಾ ರಾಯಭಾರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ‘ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿರುವ ಹಲವು ವರದಿಗಳನ್ನು ನಾವು ಗಮನಿಸಿದ್ದೇವೆ. ಚೀನಾ ಸರ್ಕಾರದಿಂದ ಇಂತಹ ಯಾವುದೇ ಸಲಹೆಗಳು ಬಂದಿಲ್ಲ. ಹಾಗಾಗಿ ರಾಯಭಾರಿ ಹೇಳಿಕೆಯನ್ನು ವೈಯಕ್ತಿಕ ಅಭಿಪ್ರಾಯವಾಗಿ ಪರಿಗಣಿಸಿದ್ದೇವೆ. ಭಾರತ–ಪಾಕಿಸ್ತಾನ ಸಂಬಂಧ ಸಂಪೂರ್ಣ ದ್ವಿಪಕ್ಷೀಯವಾಗಿದ್ದು, ಇದರಲ್ಲಿ ಭಾಗವಹಿಸಲು ಮೂರನೇ ರಾಷ್ಟ್ರಕ್ಕೆ ಅವಕಾಶವಿಲ್ಲ’ ಎಂದಿದ್ದಾರೆ.
ವಿರೋಧ ಪಕ್ಷ ಕಾಂಗ್ರೆಸ್ ಕೂಡಚೀನಾ ಅಧಿಕಾರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ.
‘ಭಾರತ–ಪಾಕಿಸ್ತಾನ ಸಮಸ್ಯೆಗಳು ಶಿಮ್ಲಾ ಒಪ್ಪಂದ ಪ್ರಕಾರ ಪರಿಹಾರ ಕಾಣಲಿವೆ’ ಎಂದಿರುವ ಈ ಪಕ್ಷದ ವಕ್ತಾರ ಮನೀಷ್ ತಿವಾರಿ, ‘ಭಾರತ ಸರ್ಕಾರ ಈ ಹೇಳಿಕೆಯನ್ನು ಬಲವಾಗಿ ಖಂಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.