ADVERTISEMENT

ಗುಜರಾತ್‌ನಲ್ಲಿ ಎಎಪಿ ಅಭ್ಯರ್ಥಿಗಳನ್ನು ನಿರ್ಧರಿಸುವುದು ಬಿಜೆಪಿ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 13:42 IST
Last Updated 5 ನವೆಂಬರ್ 2022, 13:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು (ಎಎಪಿ) ಭಾರತೀಯ ಜನತಾ ಪಕ್ಷದ (ಬಿಜೆಪಿ) ಇಚ್ಛೆಯಂತೆ ಕೆಲಸ ಮಾಡುತ್ತಿದೆ ಎಂದು ಎಎಪಿ ತೊರೆದು ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗಿರುವ ಗುಜರಾತ್‌ನ ಮಾಜಿ ಶಾಸಕ ಇಂದ್ರನೀಲ್ ರಾಜ್‌ಗುರು ಶನಿವಾರ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಗುಜರಾತ್‌ನಲ್ಲಿ ಎಎಪಿ ಅಭ್ಯರ್ಥಿಗಳ ಆಯ್ಕೆಯನ್ನು ಬಿಜೆಪಿಯ ಕಚೇರಿಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಅದನ್ನು ಅರ್ಥಮಾಡಿಕೊಂಡು ಕಾಂಗ್ರೆಸ್‌ಗೆ ಮರಳಿದ್ದೇನೆ ಎಂದು ಹೇಳಿದರು.

ADVERTISEMENT

ಇಬ್ಬರು ಮುಖ್ಯಮಂತ್ರಿಗಳು (ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ ಮಾನ್) ಅಕ್ಟೋಬರ್ 1ರಂದು ರಾಜ್‌ಕೋಟ್‌ಗೆ ಬಂದಿದ್ದರು. ಸಾಕಷ್ಟು ಹಣ ಹರಿಯುತ್ತಿರುವುದನ್ನು ನೋಡಿ ನಾನು ಇದು ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದ್ದೆ. ಅವರು ಗಾಳಿಯ ಮೂಲಕ ಬರುತ್ತಿದೆ ಎಂದು ಸನ್ನೆ ಮಾಡಿದರು. ಅವರೆಲ್ಲರೂ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ವಾಗ್ದಾಳಿಮಾಡಿದರು.

ರಾಜ್‌ಕೋಟ್‌ಗೆ ಚಾರ್ಟರ್ಡ್ ವಿಮಾನದಲ್ಲಿ ಬಂದಿಳಿದ ಕೇಜ್ರಿವಾಲ್ ಹಾಗೂ ಮಾನ್, ಹಣದ ಚೀಲಗಳನ್ನು ತಂದಿದ್ದಾರೆ ಎಂದು ರಾಜ್‌ಗುರು ಆರೋಪಿಸಿದರು. ಆದರೆ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ನೀಡಲಿಲ್ಲ.

ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಎಎಪಿಗೆ ಸೇರಿದ್ದರಿಂದ ನಾನು ಅವರ ವಿರುದ್ಧ ನಿಲುವನ್ನು ತಳೆದಿದ್ದೇನೆ. ಮುಖ್ಯಮಂತ್ರಿ ಸ್ಥಾನವನ್ನು ನಾನು ಬಯಸಿಲ್ಲ. ಬಿಜೆಪಿಯನ್ನು ಸೋಲಿಸಲು ಪ್ರಬಲ ಅಭ್ಯರ್ಥಿಗಳಿಗೆ ಸೀಟು ನೀಡಲು ಬಯಸಿದ್ದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.