ಆಗ್ರಾ: ಶುಕ್ರವಾರ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಆಗ್ರಾದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಐತಿಹಾಸಿಕ ತಾಜ್ ಮಹಲ್ನ ಅಮೃತ ಶಿಲೆಯ ಅಡ್ಡಕಂಬಿಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ರಾ ಜಿಲ್ಲಾಡಳಿತವು ಮೃತರ ಕುಟುಂಬಸ್ಥರಿಗೆ ₹4 ಲಕ್ಷ ಪರಿಹಾರವನ್ನು ಘೋಷಿಸಿದೆ.
ಮಳೆಯಿಂದಾಗಿ ಮೂವರು ಮತ್ತು ಹಲವಾರು ಪ್ರಾಣಿಗಳು ಮೃತಪಟ್ಟಿವೆ. ಕೆಲ ಮನೆಗಳಿಗೂ ಕೂಡ ಹಾನಿಯಾಗಿದೆ. ನಾವು ಸಮೀಕ್ಷೆ ನಡೆಸುತ್ತಿದ್ದೇವೆ ಮತ್ತು ನಷ್ಟವನ್ನು ಸರಿದೂಗಿಸುತ್ತೇವೆ. ಮೃತರ ರಕ್ತಸಂಬಂಧಿಗಳಿಗೆ ಜಿಲ್ಲಾಡಳಿತವು ₹4 ಲಕ್ಷ ಪರಿಹಾರವನ್ನು ನೀಡಲಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಹಣಕಾಸು) ಯೋಗೇಂದ್ರ ಕುಮಾರ್ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಚಂಡಮಾರುತದಿಂದಾಗಿ ತಾಜ್ಮಹಲ್ ಸಂಕೀರ್ಣದಲ್ಲಿನ ಮರಗಳು ಕೆಳಗುರುಳಿವೆ ಮತ್ತು ಸ್ಮಾರಕದ ಅಮೃತ ಶಿಲೆಯ ಅಡ್ಡಕಂಬಿಯನ್ನು ಹಾನಿಗೊಳಿಸಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್ಐ) ಪುರಾತತ್ವ ಶಾಸ್ತ್ರಜ್ಞ ಅಧೀಕ್ಷಕ ಬಸಂತ್ ಕುಮಾರ್ ಸ್ವರ್ಣಕರ್ ತಿಳಿಸಿದ್ದಾರೆ.
ಟಿಕೆಟ್ ನೀಡುವ ಪ್ರದೇಶದ ಪಶ್ಚಿಮ ಗೇಟ್ ಮತ್ತು ಫ್ರಿಸ್ಕಿಂಗ್ ಗೇಟ್ಗಳಿಗೆ ಹಾನಿಯಾಗಿದೆ. ಹಲವಾರು ಮರಗಳನ್ನು ಕಿತ್ತುಹಾಕಲಾಗಿದೆ. ಯಮುನಾ ನದಿಯ ಕಡೆಗಿರುವ ತಾಜ್ ಮಹಲ್ನ ಹಿಂಭಾಗದಲ್ಲಿರುವ ಅಮೃತಶಿಲೆಯ ಅಡ್ಡಕಂಬಿಗಳ ಒಂದು ಭಾಗ ಬಿದ್ದು ಕೆಂಪು ಮರಳುಗಲ್ಲಿನ ಕಂಬಿಗಳ ಎರಡು ಫಲಕಗಳು ಸಹ ಹಾನಿಗೊಳಗಾಗಿವೆ. ತಾಜ್ಮಹಲ್ ಆವರಣದಲ್ಲಿ ಸುಮಾರು ಹತ್ತು ಮರಗಳನ್ನು ಸಹ ಕಿತ್ತುಹಾಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.