ಗುಜರಾತ್ನ ಅಹಮದಾಬಾದ್ ಮೇಘಾನಿ ನಗರ್ ಪ್ರದೇಶದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜಿನ ಕ್ಯಾಂಪಸ್ನ ವಿದ್ಯಾರ್ಥಿ ನಿಲಯಕ್ಕೆ ಅಪ್ಪಳಿಸಿದ ವಿಮಾನದ ತುಂಡಾಗಿ ಬಿದ್ದಿರುವ ರೆಕ್ಕೆ. ಕಟ್ಟಡಕ್ಕೆ ಆದ ಹಾನಿ...
ರಾಯಿಟರ್ಸ್ ಚಿತ್ರ
ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಿಂದ ಇಂಗ್ಲೆಂಡ್ನತ್ತ ಪ್ರಯಾಣ ಹೊರಟ ಏರ್ಇಂಡಿಯಾ ವಿಮಾನ AI-171 ಗುರುವಾರ ಮಧ್ಯಾಹ್ನ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ದುರಂತದಲ್ಲಿ ವಿಮಾನದೊಳಗಿದ್ದವರು ಬದುಕುಳಿದಿಲ್ಲ ಎಂದು ವರದಿಯಾಗಿರುವ ಬೆನ್ನಲ್ಲೇ, ಕಟ್ಟಡದಲ್ಲಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಹಮದಾಬಾದ್ನ ಸರ್ಧಾರ್ ವಲಭಭಾಯಿ ವಿಮಾನ ನಿಲ್ದಾಣದಿಂದ ಲಂಡನ್ಗೆ ಗುರುವಾರ ಮಧ್ಯಾಹ್ನ 1.38ಕ್ಕೆ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನವು, ನಿಲ್ದಾಣದಿಂದ 7.6 ಕಿ.ಮೀ. ಅಂತರದಲ್ಲಿರುವ ಮೇಘಾನಿ ನಗರ್ ಪ್ರದೇಶದಲ್ಲಿ ಬಿಜೆ ವೈದ್ಯಕೀಯ ಕಾಲೇಜಿನ ಕ್ಯಾಂಪಸ್ ಇದ್ದು, ಇಲ್ಲಿರುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ವಸತಿನಿಲಯ ಸಮುಚ್ಚಯದ ಕಟ್ಟಡಕ್ಕೆ ಅಪ್ಪಳಿಸಿದೆ.
ವಿಮಾನ ಪತನಗೊಂಡ ವೇಳೆ ವಿದ್ಯಾರ್ಥಿಗಳು ವಸತಿನಿಲಯದ ಮೆಸ್ನಲ್ಲಿ ಊಟಕ್ಕೆ ಸೇರಿದ್ದರು. ಘಟನೆಯಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಮೃತ ವಿದ್ಯಾರ್ಥಿಗಳಲ್ಲಿ ನಾಲ್ವರು ಪದವಿಪೂರ್ವ ಮತ್ತು ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿ ಸೇರಿದ್ದಾರೆ. 30ರಿಂದ 40 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ವಿದ್ಯಾರ್ಥಿ ನಿಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲೆಟ್ ಮತ್ತು 10 ಸಿಬ್ಬಂದಿ ಇದ್ದ ಏರ್ ಇಂಡಿಯಾದ ಬೋಯಿಂಗ್ 787–8 ಡ್ರೀಮ್ಲೈನರ್ ವಿಮಾನವು 825 ಅಡಿ ಎತ್ತರದಿಂದ ಪತನಗೊಂಡಿತು.
ವಿದ್ಯಾರ್ಥಿ ನಿಲಯದ ಭೋಜನಾಲಯದ ಟೇಬಲ್ಗಳ ಮೇಲಿದ್ದ ಊಟದ ತಟ್ಟೆಗಳು, ಅಲ್ಲಿ ಬಿದ್ದಿರುವ ಕಟ್ಟಡದ ಅವಶೇಷ, ಕಟ್ಟಡದೊಳಗೆ ಸಿಲುಕಿರುವ ವಿಮಾನದ ಚಕ್ರಗಳು ಭೀಕರತೆಗೆ ಸಾಕ್ಷಿಯಂತಿವೆ.
ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಭಾರತದ ಸ್ಥಾನಿಕ ವೈದ್ಯರ ಸಂಘ (FAIMA), ‘ಅಹಮದಾಬಾದ್ನಲ್ಲಿ ಪತಗೊಂಡ ವಿಮಾನ ದುರಂತ ಸುದ್ದಿ ಆಘಾತಕಾರಿ. ವಿಮಾನವು ಬಿಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯಕ್ಕೆ ಅಪ್ಪಳಿಸಿದೆ. ವಿದ್ಯಾರ್ಥಿ ನಿಲಯದಲ್ಲಿದ್ದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿಗಳಲ್ಲಿ ಹಲವರು ಗಾಯಗೊಂಡಿರುವ ಸುದ್ದಿ ಲಭ್ಯವಾಗಿದೆ. ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಯಾವುದೇ ನೆರವಿಗೆ ಸಿದ್ಧ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೇಳಿದೆ.
‘ವಿಮಾನವು ಕೆಳಮಟ್ಟದಲ್ಲಿ ಹಾರುತ್ತಾ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಸತಿನಿಲಯ ಸಮುಚ್ಚಯದ ಕಟ್ಟಡಕ್ಕೆ ಅಪ್ಪಳಿಸಿತು. ಇಲ್ಲಿರುವ ಬಹುತೇಕ ಕಟ್ಟಡಗಳು 5 ಅಂತಸ್ತಿನವು. ಘಟನೆಯಲ್ಲಿ ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ಇದ್ದವರಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ’ ಎಂದು ಪ್ರತ್ಯಕ್ಷದರ್ಶಿ ಹರೀಶ್ ಶಾ ಹೇಳಿದ್ದಾರೆ.
ಪ್ರತ್ಯಕ್ಷ ಸಾಕ್ಷಿ ಡಾ. ಶ್ಯಾಮ್ ಗೋವಿಂದ್ ಎಂಬುವವರು ಘಟನೆ ಕುರಿತು ಮಾಹಿತಿ ನೀಡಿ, ‘ಘಟನೆಯಲ್ಲಿ ನಾನು ಮತ್ತು ನನ್ನ ಕಿರಿಯ ಸಹಪಾಠಿ ಗಾಯಗೊಂಡೆವು. 30ರಿಂದ 40 ವಿದ್ಯಾರ್ಥಿಗಳು ಗಾಯಗೊಂಡರು. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ಮಗನನ್ನು ನೋಡಲು ಬಂದಿದ್ದ ತಾಯಿ ರಮಿಲಾ ಅವರು ಘಟನೆಯನ್ನು ಕಂಡು ಆಘಾತಗೊಂಡಿದ್ದಾರೆ. ‘ಊಟದ ಸಮಯಕ್ಕೆ ಹಾಸ್ಟೆಲ್ಗೆ ಭೇಟಿ ನೀಡಿದ್ದೆ. ಅದೇ ಸಂದರ್ಭದಲ್ಲಿ ವಿಮಾನ ಪತಗೊಂಡಿತು. ಆಘಾತದಲ್ಲಿ ನನ್ನ ಮಗ 2ನೇ ಮಹಡಿಯಿಂದ ಕೆಳಕ್ಕೆ ಜಿಗಿದ. ಆತ ಸುರಕ್ಷಿತವಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಎಎನ್ಐಗೆ ಮಾಹಿತಿ ನೀಡಿದ್ದಾರೆ.
‘ವಸತಿನಿಲಯದ ಕಟ್ಟಡದ ಹೊರಗೆ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕೆಲವು ದ್ವಿಚಕ್ರ ವಾಹನಗಳು, ಕಾರುಗಳು ಬೆಂಕಿಯಿಂದ ಸುಟ್ಟುಹೋದವು’ ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಬಿಜೆ ಸರ್ಕಾರಿ ವೈದ್ಯಕೀಯ ಕಾಲೇಜು ದೇಶದ ಹಳೆಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದು. 100 ಎಕರೆ ಪ್ರದೇಶದಲ್ಲಿ ಕಾಲೇಜಿನ ಕ್ಯಾಂಪಸ್ ಹರಡಿಕೊಂಡಿದೆ. 1871ರಲ್ಲಿ ಪ್ರಾರಂಭವಾದ ಈ ಕಾಲೇಜಿನಲ್ಲಿ ಪ್ರತಿವರ್ಷ ಎಂಬಿಬಿಎಸ್ಗೆ 250 ವಿದ್ಯಾರ್ಥಿಗಳು, ಹಾಗೂ ಸ್ನಾತಕೋತ್ತರ ಪದವಿಗೆ 400ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.
ವಿಮಾನ ಪತನ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ, ‘ಪೈಲಟ್ ಕ್ಯಾಪ್ಟನ್ ಸುಮೀತ್ ಸಭರವಾಲ್ ಅವರು ಅಪಘಾತಕ್ಕೂ ಮೊದಲು ಎಟಿಸಿಗೆ ಕರೆ ಮಾಡಿ ‘ಮೇಡೇ’ ಎಂದು ದುರಂತದ ಸಂದೇಶ ನೀಡಿದ್ದಾರೆ. ವಾಯು ಮಾರ್ಗ ಅಥವಾ ಜಲ ಮಾರ್ಗದ ಮೂಲಕ ಪ್ರಯಾಣಿಸುವ ವಿಮಾನ ಹಾಗೂ ಹಡಗುಗಳಲ್ಲಿ ಜೀವಕ್ಕೆ ಅಪಾಯ ಎದುರಾದಾಗ ನೀಡುವ ಅಂತರರಾಷ್ಟ್ರೀಯ ಮಾನದಂಡ ಈ ‘ಮೇಡೇ’ ಆಗಿದೆ.
ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ‘ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತವು ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕ ಘಟನೆಯಾಗಿದೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೇಳಿದ್ದಾರೆ.
ವಿಮಾನ ನಿಲ್ದಾಣದಿಂದ ಸಮೀಪದ ಮೇಘಾನಿನಗರ ಪ್ರದೇಶದಲ್ಲಿ ಬಿ.ಜೆ. ವೈದ್ಯಕೀಯ ಕಾಲೇಜಿನ ಕ್ಯಾಂಪಸ್ ಇದ್ದು, ಇಲ್ಲಿರುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯ ಸಮುಚ್ಚಯದ ಕಟ್ಟಡಕ್ಕೆ ವಿಮಾನ ಅಪ್ಪಳಿಸಿದೆ. ವಿಮಾನ ಪತನದ ವೇಳೆ ವಿದ್ಯಾರ್ಥಿಗಳು ವಸತಿ ನಿಲಯದ ಮೆಸ್ನಲ್ಲಿ ಊಟಕ್ಕೆ ಸೇರಿದ್ದರು.
‘ವಿಮಾನವು ಕೆಳ ಮಟ್ಟದಲ್ಲಿ ಹಾರುತ್ತಾ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯ ಸಮುಚ್ಚಯದ ಕಟ್ಟಡಕ್ಕೆ ಅಪ್ಪಳಿಸಿತು. ಇಲ್ಲಿರುವ ಬಹುತೇಕ ಕಟ್ಟಡಗಳು 5 ಅಂತಸ್ತಿನವು. ಘಟನೆಯಲ್ಲಿ ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ಅಪಾರ್ಟ್ಮೆಂಟ್ ಗಳಲ್ಲಿ ಇದ್ದವರಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ’ ಎಂದು ಪ್ರತ್ಯಕ್ಷದರ್ಶಿ ಹರೀಶ್ ಶಾ ಹೇಳಿದ್ದಾರೆ. ‘ವಸತಿ ನಿಲಯದ ಕಟ್ಟಡದ ಹೊರಗೆ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕೆಲವು ದ್ವಿಚಕ್ರ ವಾಹನಗಳು, ಕಾರುಗಳು ಬೆಂಕಿಯಿಂದ ಸುಟ್ಟುಹೋದವು’ ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.