ADVERTISEMENT

ವಿಮಾನಯಾನ ಸುರಕ್ಷತೆಗೆ ಕಾಯ್ದೆ ತಿದ್ದುಪಡಿ: ರಾಮಮೋಹನ್‌ ನಾಯ್ಡು

‘ಸಚಿವಾಲಯಗಳಿಂದ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ’

ಪಿಟಿಐ
Published 11 ಡಿಸೆಂಬರ್ 2024, 15:32 IST
Last Updated 11 ಡಿಸೆಂಬರ್ 2024, 15:32 IST
ಕೆ. ರಾಮಮೋಹನ್‌ ನಾಯ್ಡು
ಕೆ. ರಾಮಮೋಹನ್‌ ನಾಯ್ಡು   

ಹೈದರಾಬಾದ್‌: ವಿಮಾನಯಾನ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ‘ನಾಗರಿಕ ವಿಮಾನಯಾನ ಸುರಕ್ಷತಾ ಕಾಯ್ದೆ 1982’ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಪ್ರಸ್ತಾವಿತ ತಿದ್ದುಪಡಿಗೆ ವಿವಿಧ ಸಚಿವಾಲಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಬುಧವಾರ ತಿಳಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಿಕ ವಿಮಾನಯಾನ ಸಚಿವಾಲಯವು ‘ಡಿಜಿ ಯಾತ್ರಾ’ದಂತಹ ಸೌಲಭ್ಯಗಳ ಮೂಲಕ ಎಲ್ಲ ದತ್ತಾಂಶವನ್ನು ಸಂಗ್ರಹಿಸಿ, ಯಾವುದೇ ನೀತಿ ನಿರ್ಧಾರಗಳಿಗೆ ಅವುಗಳನ್ನು ಬಳಸಲು ಅನುಕೂಲವಾಗುವಂತೆ ‘ಕೇಂದ್ರೀಕೃತ ದತ್ತಾಂಶ ಕೋಶ’ವನ್ನು ರಚಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದ್ದಾರೆ.

‘ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಅಪರಾಧಗಳನ್ನು ತಡೆಯಲು ಎಸ್‌ಯುಎಎಸ್‌ಸಿಎ ಕಾಯ್ದೆ ನಮ್ಮಲ್ಲಿ ಇದೆ. ಇದಕ್ಕೆ ನಾವು ಒಂದು ಸಣ್ಣ ತಿದ್ದುಪಡಿಯನ್ನು ಪ್ರಸ್ತಾಪಿಸಿದ್ದೇವೆ. ವಿವಿಧ ಸಚಿವಾಲಯಗಳ ಜತೆಗೆ ಈ ಕುರಿತು ಸಮಾಲೋಚನೆ ನಡೆಯುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ವಿಮಾನ ಭದ್ರತಾ ನಿಯಮಗಳ ತಿದ್ದುಪಡಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿದ ನಂತರ, ಹುಸಿ ಕರೆ ಅಪರಾಧಿಗಳನ್ನು ‘ನೋ-ಫ್ಲೈ’ ಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. 

ವಿಮಾನಗಳ ಸಂಖ್ಯೆ ಏರಿಕೆಯಾಗಲಿದೆ: ದೇಶದಲ್ಲಿರುವ 800 ವಿಮಾನಗಳ ಸಂಖ್ಯೆಯು ಸದ್ಯವೇ 2,300ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಪೈಲಟ್‌ಗಳ ಬೇಡಿಕೆ ಹೆಚ್ಚುತ್ತಿದ್ದು, ಇದನ್ನು ಪೂರೈಸಲು ಹೆಚ್ಚಿನ ಸಂಖ್ಯೆಯಲ್ಲಿ ಫ್ಲೈಯಿಂಗ್ ತರಬೇತಿ ಸಂಸ್ಥೆಗಳನ್ನು (ಎಫ್‌ಟಿಒ) ಸ್ಥಾಪಿಸಲು ಸಚಿವಾಲಯವು ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ಸಚಿವ ಕೆ.ರಾಮಮೋಹನ್‌ ನಾಯ್ಡು ಹೇಳಿದರು.

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್ ಪ್ರಿಡಿಕ್ಟಿವ್ ಆಪರೇಷನ್ ಸೆಂಟರ್ (ಎಪಿಒಸಿ) ಉದ್ಘಾಟನೆ ನಂತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು ಹೊಸ ಎತ್ತರವನ್ನು ತಲುಪುತ್ತಿದೆ ಎಂದರು.

ಭಾರತೀಯ ವಿಮಾನ ನಿಲ್ದಾಣಗಳು ಈ ವರ್ಷದ ಅಕ್ಟೋಬರ್‌ನಲ್ಲಿ ಶೇ 5.3 ರಷ್ಟು ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ, ವಿಮಾನ ಸಂಚಾರ ಮಾಡಿದ ದೇಸಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, 1.36 ಕೋಟಿ ಮುಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.