ಬೆಂಗಳೂರು: ಗುಜರಾತ್ನ ಜಾಮಾನಗರದಲ್ಲಿ ಉದ್ಯಮಿ ಅನಂತ್ ಅಂಬಾನಿ ಸ್ಥಾಪಿಸಿರುವ ಅತ್ಯಾಧುನಿಕ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಸಂಸ್ಥೆಯಾದ ವಂತಾರಾಕ್ಕೆ, ಇಸ್ಕಾನ್ನ ಎರಡು ಆನೆಗಳು ಶೀಘ್ರದಲ್ಲೇ ಸೇರ್ಪಡೆಯಾಗಲಿವೆ.
ಕೋಲ್ಕತ್ತ ಬಳಿಯ ಮಾಯಾಪುರದಲ್ಲಿರುವ ಇಸ್ಕಾನ್ ದೇಗುಲದ 18 ವರ್ಷದ ಬಿಷ್ಣುಪ್ರಿಯಾ ಮತ್ತು 26 ವರ್ಷದ ಲಕ್ಷ್ಮಿಪ್ರಿಯಾ ಎಂಬ ಎರಡು ಹೆಣ್ಣಾನೆಗಳನ್ನು ಸ್ವಾಗತಿಸಲು ವಂತಾರಾ ಸಜ್ಜಾಗಿದೆ.
ಕಳೆದ ವರ್ಷದ ಏಪ್ರಿಲ್ನಲ್ಲಿ ಬಿಷ್ಣುಪ್ರಿಯಾ ಆನೆಯು ತನ್ನ ಮಾವುತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಘಟನೆ ನಂತರ ಆನೆಗಳ ವಿಶೇಷ ಆರೈಕೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚು ಸೂಕ್ತವಾದ ವಾತಾವರಣ ಕಲ್ಪಿಸಲು ಈ ಸ್ಥಳಾಂತರ ಮಾಡಲಾಗುತ್ತಿದೆ.
ತ್ರಿಪುರಾ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನ ಅನುಮತಿಯೊಂದಿಗೆ ವಂತಾರಾ ಮತ್ತು ಇಸ್ಕಾನ್ ನಡುವಿನ ಸಹಭಾಗಿತ್ವದ ಮೂಲಕ ಈ ಆನೆಗಳನ್ನು ವರ್ಗಾವಣೆ ಮಾಡಲಾಗುತ್ತಿದೆ.
‘ಬಿಷ್ಣುಪ್ರಿಯಾ ಮತ್ತು ಲಕ್ಷ್ಮಿಪ್ರಿಯಾ ವಂತಾರಾದಲ್ಲಿ ಬೆಳೆಯಲಿದ್ದು, ಶೀಘ್ರದಲ್ಲೇ ಹೊಸ ಸ್ನೇಹಿತರನ್ನು ಪಡೆಯಲಿವೆ. ಇಲ್ಲಿ ಆನೆಗಳು ಸ್ವಾತಂತ್ರ್ಯ ಪಡೆಯುವ ಮೂಲಕ ಸಂತೃಪ್ತ ಜೀವನ ನಡೆಸಲಿವೆ’ ಎಂದು ಇಸ್ಕಾನ್ ದೇಗುದ ಹಿರಿಯ ಸದಸ್ಯೆ ಹ್ರಿಮತಿ ದೇವಿ ದಾಸಿ ಹೇಳಿದ್ದಾರೆ.
ಇಸ್ಕಾನ್ನ ಮಾಯಾಪುರದಲ್ಲಿ 2007ರಿಂದ ಲಕ್ಷ್ಮಿಪ್ರಿಯಾ ಮತ್ತು 2010ರಿಂದ ಬಿಷ್ಣುಪ್ರಿಯಾವನ್ನು ದೇವಾಲಯದ ಆಚರಣೆಗಳು ಮತ್ತು ವಿವಿಧ ಉತ್ಸವ ಸಂದರ್ಭಗಳಲ್ಲಿ ಬಳಸಲಾಗುತ್ತಿತ್ತು. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಮತ್ತು ವರ್ಲ್ಡ್ ಅನಿಮಲ್ ಪ್ರೊಟೆಕ್ಷನ್ ಸೇರಿದಂತೆ ಪ್ರಾಣಿ ಸಂರಕ್ಷಣಾ ಸಂಸ್ಥೆಗಳು, ಈ ಆನೆಗಳನ್ನು ಆರೈಕೆ ಕೇಂದ್ರಕ್ಕೆ ರವಾನಿಸಬೇಕು ಎಂದು ಪ್ರತಿಪಾದಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.