ತಿರುಪತಿ ತಿರಮಲ
ತಿರುಪತಿ: ಹಿಂದೂಯೇತರ ಧಾರ್ಮಿಕ ನಂಬಿಕೆಯುಳ್ಳ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಸುಮಾರು 1,000 ಉದ್ಯೋಗಿಗಳನ್ನು ದೇವಾಲಯ ಮಂಡಳಿ ಸೇವೆಗಳಿಂದ ತೆಗೆದುಹಾಕಬೇಕು ಎಂದು ಆಂಧ್ರಪ್ರದೇಶ ಬಿಜೆಪಿ ಆಗ್ರಹಿಸಿದೆ.
ಈ ಕುರಿತು ಮಾತನಾಡಿರುವ ಆಂಧ್ರಪ್ರದೇಶ ಬಿಜೆಪಿ ಘಟಕದ ವಕ್ತಾರ, ಟಿಟಿಡಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ, ಮಂಡಳಿಯ ಪ್ರತಿನಿಧಿಗಳು ಫೆಬ್ರುವರಿ 14ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಲಿದ್ದು, ಹಿಂದೂಯೇತರ ಧಾರ್ಮಿಕ ನಂಬಿಕೆಯುಳ್ಳವರ ಸೇವೆ ಅಗತ್ಯವಿಲ್ಲ. ಅವರನ್ನು ತೆಗೆದುಹಾಕಬೇಕು ಎಂದು ಮನವಿ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
‘ಟಿಟಿಡಿಯಲ್ಲಿ 6,500ಕ್ಕೂ ಹೆಚ್ಚು ಖಾಯಂ ಉದ್ಯೋಗಿಗಳು ಮತ್ತು 17,000ಕ್ಕೂ ಹೆಚ್ಚು ಗುತ್ತಿಗೆ ನೌಕರರಿದ್ದಾರೆ. ಒಟ್ಟು ನೌಕರರ ಸಂಖ್ಯೆ ಸುಮಾರು 24,000ಕ್ಕೆ ತಲುಪಿದೆ. ಇದರಲ್ಲಿ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಹಿಂದೂಯೇತರ ಧರ್ಮವನ್ನು ಅನುಸರಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. ಆದ್ದರಿಂದ, ಈ ವಿಷಯದ ಕುರಿತು ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಹಿಂದೂಯೇತರ ನೌಕರರು ಟಿಟಿಡಿಯಿಂದ ಸಂಬಳ ಪಡೆಯುತ್ತಾರೆ. ಆದರೆ, ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸುವುದಿಲ್ಲ. ಟಿಟಿಡಿ ಕಾಯ್ದೆಯು ಹಿಂದೂಗಳು ಮಾತ್ರ ದೇವಾಲಯದ ಆಚರಣೆಗಳನ್ನು ಮಾಡಬೇಕೆಂದು ಆದೇಶಿಸುತ್ತದೆ ಮತ್ತು ಎಲ್ಲಾ ಸಿಬ್ಬಂದಿ ಹಿಂದೂಗಳಾಗಿರಬೇಕು ಎಂದು ರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.