ತಿರುವನಂತಪುರಂ: ಕೇರಳದ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ವಿವಿಧ ಖಾತೆಗಳಿಂದ ಒಟ್ಟು ₹8 ಕೋಟಿ ಎಗರಿಸಿದ ಪ್ರಕರಣ ವರದಿಯಾಗಿದೆ.
ಪತ್ತನಂತಿಟ್ಟದ ಕೆನರಾ ಬ್ಯಾಂಕ್ ಶಾಖೆಯ ಉದ್ಯೋಗಿ ವಿಜೀಶ್ ವರ್ಗೀಸ್ ಎಂಬಾತ ನಿಶ್ಚಿತ ಠೇವಣಿ ಹೊಂದಿದ್ದ ಆದರೆ ಚಾಲೂ ಇಲ್ಲದ ಖಾತೆಗಳಿಂದ ಹಣ ತೆಗೆಯುತ್ತಿದ್ದ ಎನ್ನಲಾಗಿದೆ.
ಬಳಕೆಯಾಗದೇ ಇರುವ ಖಾತೆಗಳನ್ನು ಗುರುತಿಸುತ್ತಿದ್ದ ವಿಜೀಶ್, ಕಳೆದ ಫೆಬ್ರವರಿಯಲ್ಲಿ ಮತ್ತೋರ್ವ ಬ್ಯಾಂಕ್ ಉದ್ಯೋಗಿಯ ಎಫ್ಡಿ ಖಾತೆಯನ್ನು ಆಕಸ್ಮಿಕವಾಗಿ ಮುಚ್ಚಿದಾಗ ಈತನ ವಂಚನೆ ಬೆಳಕಿಗೆ ಬಂದಿದೆ.
ವಿಜೀಶ್ ಈ ಮೊದಲು ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ವಿಜೀಶ್ ತಪ್ಪಿಸಿಕೊಂಡಿದ್ದು, ನಂತರ ಕಳೆದ ಭಾನುವಾರ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ, ಕೇರಳಕ್ಕೆ ಕರೆತರಲಾಗಿದೆ. ಬ್ಯಾಂಕ್ ಖಾತೆಗಳಿಂದ ಎಗರಿಸಿದ ಹಣವನ್ನು ಆನ್ಲೈನ್ ಗೇಮ್ ಮತ್ತು ಷೇರು ವ್ಯವಹಾರದಲ್ಲಿ ಬಳಸಿಕೊಂಡಿರುವುದಾಗಿ ವಿಜೀಶ್ ಪೊಲೀಸರಿಗೆ ತಿಳಿಸಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.