ಹುಡ್ಕೊ ಮುಖ್ಯಸ್ಥರನ್ನು ಭೇಟಿಯಾದ ರೇವಂತ್ ರೆಡ್ಡಿ
ಎಕ್ಸ್ ಚಿತ್ರ: @revanth_anumula
ಹೈದರಾಬಾದ್: ಹೈದರಾಬಾದ್ ನಗರದ ಹೊರ ವಲಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ‘ಭಾರತ್ ಫ್ಯೂಚರ್ ಸಿಟಿ’ ಸಹಿತ ರಾಜ್ಯದ ಹಲವು ಪ್ರತಿಷ್ಠಿತ ಯೋಜನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಎಂದು ಹುಡ್ಕೊ ಮುಖ್ಯಸ್ಥ ಸಂಜಯ್ ಕುಲಶ್ರೇಷ್ಠ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮನವಿ ಮಾಡಿದ್ದಾರೆ.
ಹುಡ್ಕೊ ಮುಖ್ಯಸ್ಥರನ್ನು ಭೇಟಿಯಾಗಿ ಹೈದರಾಬಾದ್ ಮೆಟ್ರೊ ರೈಲು ವಿಸ್ತರಣೆ, ಪ್ರಾದೇಶಿಕ ವರ್ತುಲ ರಸ್ತೆ ಹಾಗೂ ರೇಡಿಯಲ್ ರಸ್ತೆ ನಿರ್ಮಾಣಕ್ಕೆ ಸಾಲ ನೀಡಬೇಕು ಎಂದು ವಿನಂತಿಸಿದ್ದಾರೆ.
ಉದ್ದೇಶಿತ ಭಾರತ್ ಫ್ಯೂಚರ್ ಸಿಟಿಯಿಂದ ಬೆಂಗಳೂರು, ಅಮರಾವತಿ ಮಾರ್ಗವಾಗಿ ಚೆನ್ನೈ ಸಂಪರ್ಕಿಸುವ ಗ್ರೀನ್ಫೀಲ್ಡ್ ರಸ್ತೆ ನಿರ್ಮಾಣ, ಮಚಲೀಪಟ್ಟಣ ಬಂದರಿಗೆ ಗ್ರೀನ್ಫೀಲ್ಡ್ ರಸ್ತೆ ಹಾಗೂ ಬುಲೆಟ್ ರೈಲು ಮಾರ್ಗ ನಿರ್ಮಾಣದ ಬಗ್ಗೆ ಹುಡ್ಕೊ ಮುಖ್ಯಸ್ಥರಿಗೆ ರೆಡ್ಡಿ ವಿವರಿಸಿದ್ದಾಗಿ ಪ್ರಕಟಣೆ ತಿಳಿಸಿದೆ.
ಈ ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ಹೆಚ್ಚಿನ ಬಡ್ಡಿದರದ ಸಾಲಗಳನ್ನು ಪುನಾರಚನೆ ಮಾಡಲೂ ಕೋರಿದ್ದಾರೆ. ಹುಡ್ಕೊ ಮುಖ್ಯಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹೆಚ್ಚು ಬಡ್ಡಿದರದಲ್ಲಿ ಪಡೆದಿರುವ ಸಾಲಗಳ ಬಗ್ಗೆಯೂ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ರಾಜ್ಯದ ಬಡವರಿಗೆ ಮನೆ ನಿರ್ಮಿಸಿ ಕೊಡುವ ‘ಇಂದಿರಮ್ಮ ಮನೆ ಯೋಜನೆ’ಗೆ ಈಗಾಗಲೇ ಹಣ ನೀಡಿದ್ದಾಗಿ ಕುಲಶ್ರೇಷ್ಠ ಅವರು ರೆಡ್ಡಿ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಇನ್ನೂ 10 ಸಾವಿರ ಮನೆಗಳ ನಿರ್ಮಾಣಕ್ಕೆ ಸಾಲ ನೀಡುವ ಭರವಸೆಯನ್ನು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.