
ಮತದಾರರ ಪಟ್ಟಿ
ಕೃಪೆ:ಪಿಟಿಐ
ನವದೆಹಲಿ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ದಶಕಗಳ ಬಳಿಕ ರಾಜಕಾರಣಕ್ಕೆ ವಾಪಸ್ ಆದರೇ? ಈಗಾಗಲೇ ಮೃತಪಟ್ಟಿರುವ ಇಬ್ಬರು ಮಾಜಿ ಪ್ರಧಾನಿಗಳು ಕಣಕ್ಕಿಳಿದಿರುವುದು ಹೇಗೆ? ಲಾಲು ಪ್ರಸಾದ್ ಅವರು ತಮ್ಮದೇ ಪಕ್ಷ ಆರ್ಜೆಡಿ ವಿರುದ್ಧ ಸ್ಪರ್ಧಿಸುತ್ತಿರುವುದೇಕೆ?
ಬಿಹಾರ ವಿಧಾನಸಭಾ ಚುನಾವಣಾ ಕಣದಲ್ಲಿರುವ 2,616 ಅಭ್ಯರ್ಥಿಗಳ ಹೆಸರುಗಳನ್ನು ನೋಡಿದರೆ, ಇಂತಹ ಸಾಕಷ್ಟು ಪ್ರಶ್ನೆಗಳು ಮೂಡುತ್ತವೆ.
ಅಸಲಿಗೆ ಮೇಲೆ ಹೇಳಿದವರು, ನಿಜವಾದ ಅಮಿತಾಬ್ ಬಚ್ಚನ್, ಲಾಲು ಪ್ರಸಾದ್ ಅವರಲ್ಲ. ಬದಲಾಗಿ, ಅವರದ್ದೇ ಹೆಸರಿನ ಇತರ ವ್ಯಕ್ತಿಗಳು. ಇವರಷ್ಟೇ ಅಲ್ಲ. ಅಟಲ್ ಬಿಹಾರಿ (ವಾಜಪೇಯಿ), ಮನಮೋಹನ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಫೈರ್ಬ್ರಾಂಡ್ ಕನ್ಹಯ್ಯ ಕುಮಾರ್ ಮತ್ತು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಅವರ ಹೆಸರಿನವರೂ ಗೆಲುವಿಗಾಗಿ ಎದುರು ನೋಡುತ್ತಿದ್ದಾರೆ.
1980ರ ದಶಕದಲ್ಲೇ ಚುನಾವಣಾ ರಾಜಕೀಯದಿಂದ ಹೊರನಡೆದಿರುವ ಬಾಲಿವುಡ್ ನಟ ಅಮಿತಾಬ್ ಹೆಸರಿನ ವ್ಯಕ್ತಿ ಬರ್ಹ್ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಸನಾತನ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇದೇ ಮೊದಲ ಸಲ ಸ್ಪರ್ಧೆಗೆ ಇಳಿದಿರುವ ಅವರು, ವೃತ್ತಿಯಿಂದ ಗುತ್ತಿಗೆದಾರರಾಗಿದ್ದು, ₹ 14.6 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಬಚ್ಚನ್ ಹೆಸರಿನ ಈ ವ್ಯಕ್ತಿಗೆ ಶಾಲಾ ದಾಖಲಾತಿ ಸಂದರ್ಭದಲ್ಲಿ, ಶಿಕ್ಷಕರೊಬ್ಬರು ಅಮಿತಾಬ್ ಎಂಬ ಉಪನಾಮ ಸೇರಿಸಿದ್ದರು. ಆಗಿನಿಂದ ಇವರು, ಅಮಿತಾಬ್ ಬಚ್ಚನ್ ಆಗಿದ್ದಾರೆ.
ಸ್ಪರ್ಧೆ ಕುರಿತು ಮಾತನಾಡಿರುವ ಅವರು, 'ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಸ್ಪರ್ಧೆಗೆ ಇಳಿದಿದ್ದೇನೆ. ಹಿಂದೂಗಳು ಅಸುರಕ್ಷಿತರಾಗಿದ್ದಾರೆ. ಆಸ್ಪತ್ರೆಗಳಲ್ಲಿ ಬಡವರಿಗೆ ಸರಿಯಾದ ಸೇವೆಗಳು ಸಿಗುತ್ತಿಲ್ಲ. ನಮಗೆ ಬದಲಾವಣೆ ಬೇಕಾಗಿದೆ' ಎಂದಿದ್ದಾರೆ.
ಬಚ್ಚನ್ ಮಾತ್ರವಲ್ಲದೆ, ಬಾಲಿವುಡ್ನ ಮತ್ತೊಬ್ಬ ಖ್ಯಾತ ನಟ 'ಸೈಫ್ ಅಲಿ ಖಾನ್' ಅವರು ಮನಿಹರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ₹ 90,000 ಮೌಲ್ಯದ ಆಸ್ತಿ ಹೊಂದಿರುವ ಈ 'ಖಾನ್' ಸಮಾಜ ಸೇವಕರಾಗಿದ್ದು, ಎನ್ಸಿಪಿ ಅಭ್ಯರ್ಥಿಯಾಗಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ, ಅವರದ್ದೇ ಹೆಸರಿನ ಹಾಗೂ ರಾಷ್ಟ್ರೀಯ ಜನಸಂಭವನ ಪಕ್ಷದ ಅಭ್ಯರ್ಥಿ ಕಣದಲ್ಲಿದ್ದಾರೆ. ಅವರು, ಆರ್ಜೆಡಿ ಅಭ್ಯರ್ಥಿ ಜಿತೇಂದ್ರ ಕುಮಾರ್ ರೈ ವಿರುದ್ಧ ಮರ್ಹೌರಾದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಎಲ್ಜೆಪಿ (ಆರ್ವಿ) ಅಭ್ಯರ್ಥಿ ಸೀಮಾ ಸಿಂಗ್ ನಾಮಪತ್ರ ತಿರಸ್ಕೃತಗೊಂಡಿದೆ.
ಈ ಹಿಂದೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿಯೂ ಸ್ಪರ್ಧಿಸಿ ಸೋಲು ಕಂಡಿರುವುದಾಗಿ ಹೇಳಿಕೊಂಡಿರುವ ಈ 'ಲಾಲು', 'ಸಾಕಷ್ಟು ಜನರು ಗೆದ್ದಿದ್ದಾರೆ. ಆದರೆ, ಯಾವ ಅಭಿವೃದ್ಧಿಯೂ ಆಗಿಲ್ಲ. ನಾನು ಅಭಿವೃದ್ಧಿಗಾಗಿ ಹೋರಾಟ ಮುಂದುವರಿಸುತ್ತೇನೆ' ಎಂದಿದ್ದಾರೆ.
ಇದೇ ರೀತಿ ಮಾಜಿ ಪ್ರಧಾನಿಗಳ ಹೆಸರಿನ ಇಬ್ಬರು ಸುದ್ದಿಯಲ್ಲಿದ್ದಾರೆ. ಮನಮೋಹನ್ ಸಿಂಗ್ ಹೆಸರಿನ, 42 ವರ್ಷದ ನಿವೃತ್ತ ಯೋಧ 'ಸಂದೇಶ್' ಕ್ಷೇತ್ರದಿಂದ ರಾಷ್ಟ್ರವಾದಿ ಜನಲೋಕ್ ಪಕ್ಷದ ಹುರಿಯಾಳಾಗಿದ್ದಾರೆ. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಮತ್ತೊಬ್ಬರು ಗರಿಬ್ಜಂತಾ ಪಕ್ಷದ (ಲೋಕತಾಂತ್ರಿಕ್) ಅಭ್ಯರ್ಥಿಯಾಗಿ ಬೆಲ್ದೌರ್ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಹೆಸರಿನ ನಾಲ್ಕು ಮಂದಿ ಗುರೌ, ಮೊಹಾನಿಯಾ, ಜೆಹನಾಬಾದ್, ಬ್ರಹ್ಮಪುರ ಕ್ಷೇತ್ರಗಳಲ್ಲಿ ಕ್ರಮವಾಗಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ, ಅಸಂಖ್ಯ ಸಮಾಜ ಪಕ್ಷ, ಭಾಗಿದಾರಿ ಪಕ್ಷ ಮತ್ತು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಸಿಎಂ ನಿತೀಶ್ ಅವರು ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದರೆ, ಬ್ರಹ್ಮಪುರದ ನಿತೀಶ್ ಗಣಿ ಎಂಜಿನಿಯರ್ ಎಂಬುದು ವಿಶೇಷ.
ಜನ ಸುರಾಜ್ ಪಕ್ಷ 'ಸುಭಾಷ್ ಚಂದ್ರ ಬೋಸ್' ಹೆಸರಿನ ವ್ಯಕ್ತಿಯನ್ನು ಸಿಂಕಂದ್ರಾದಿಂದ ಇಳಿಸಿದೆ. ಕನ್ಹಯ್ಯ ಕುಮಾರ್ ಹೆಸರಿನ ಇಬ್ಬರು ವಿಭೂತಿಪುರ, ಮುಜಾಫರ್ಪುರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೆಸರಿನ ವ್ಯಕ್ತಿ ಲೋಹಿಯಾ ಜನತಾ ದಳ ಅಭ್ಯರ್ಥಿಯಾಗಿ ಛೆನಾರಿಯಲ್ಲಿ ಮತ್ತು ಭಾಗಿದಾರಿ ಪಕ್ಷದ ಅಭ್ಯರ್ಥಿಯಾಗಿ ದುಮ್ರೌನ್ನಲ್ಲಿ ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.