
ಪಟ್ನಾ: 'ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆಯಾಗಲಿದ್ದು, ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು' ಎಂದು ಕಾಂಗ್ರೆಸ್ ಹೇಳಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ಒಂದು ದಿನ ಮುನ್ನ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಬಿಹಾರವನ್ನು 20 ವರ್ಷಗಳ ದುರಾಡಳಿತದಿಂದ ಮುಕ್ತಗೊಳಿಸಲಾಗುವುದು' ಎಂದು ಹೇಳಿದ್ದಾರೆ.
'ಇನ್ನು ಮುಂದೆ ವಲಸೆ ಹೋಗುವುದು ನಿಲ್ಲುತ್ತದೆ. ಯುವಜನರ ಭವಿಷ್ಯದಿಂದ ಕತ್ತಲೆ ಮಾಯವಾಗುತ್ತದೆ. ಪ್ರತಿ ಮನೆಯೂ ಉಜ್ವಲ ನಾಳೆಯನ್ನು ಹೊಂದಿರುತ್ತದೆ. ಅನ್ಯಾಯ ಕೊನೆಗೊಳ್ಳುತ್ತದೆ. ಬಿಹಾರದಲ್ಲಿ ಸಾಮಾಜಿಕ ನ್ಯಾಯ ನೆಲೆಗೊಳ್ಳಲಿದೆ' ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ ದಲಿತರು, ಬುಡಕಟ್ಟು ಜನಾಂಗ, ಹಿಂದುಳಿದವರು, ಆರ್ಥಿಕವಾಗಿ ದುರ್ಬಲ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಯುವಜನರು ಸೇರಿದಂತೆ ಸಮಾಜದ ಪ್ರತಿಯೊಂದು ವಿಭಾಗದವರು ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ' ಎಂದು ಹೇಳಿದ್ದಾರೆ.
'ಬಿಹಾರದ ವೈಭವವನ್ನು ನಾವು ಪುನಃಸ್ಥಾಪಿಸಲಿದ್ದೇವೆ. ಮಹಾಘಟಬಂಧನ ಸರ್ಕಾರ ರಚನೆಯಾದ ಕೂಡಲೇ ಭರವಸೆಗಳನ್ನು ಜಾರಿಗೆ ತರಲಾಗುವುದು' ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸಹ ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆ ಖಚಿತ ಎಂದು ಹೇಳಿದ್ದಾರೆ. ಬಿಹಾರದ ಪ್ರತಿ ಮನೆಗೆ ಉದ್ಯೋಗ ಸೇರಿದಂತೆ ಪ್ರಣಾಳಿಕೆಯ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಬಿಹಾರದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಾಳೆ (ನ.11) ನಡೆಯಲಿದ್ದು, ನ. 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.