ADVERTISEMENT

ಮನಮೋಹನ್ ಸಿಂಗ್‌ ಅವರನ್ನು ಕೆಲವರು ಕೈಗೊಂಬೆಯಾಗಿಸಿಕೊಂಡಿದ್ದರು: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 8:37 IST
Last Updated 3 ಸೆಪ್ಟೆಂಬರ್ 2019, 8:37 IST
   

ನವದೆಹಲಿ: ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕಳವಳ ವ್ಯಕ್ತಪಡಿಸಿರುವುದನ್ನು ಖಂಡಿಸಿರುವ ಬಿಜೆಪಿ, ‘ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರವನ್ನು ಉತ್ತೇಜಿಸಲು ಕೆಲವರು ಮನಮೋಹನ್ ಸಿಂಗ್ ಅವರನ್ನು ಕೈಗೊಂಬೆಯಾಗಿಸಿಕೊಂಡಿದ್ದರು’ ಆರೋಪಿಸಿದೆ.

ಅರ್ಥ ವ್ಯವಸ್ಥೆಯ ಸ್ಥಿತಿ ‘ಭಾರಿ ಕಳವಳ’ಕಾರಿಯಾಗಿದೆ. ಕೇಂದ್ರ ಸರ್ಕಾರವು‘ದ್ವೇಷ ಸಾಧಿಸುವ ರಾಜಕಾರಣ’ವನ್ನು ಬದಿಗಿಟ್ಟು ಆರ್ಥಿಕತೆಯನ್ನು ಸರಿಪಡಿಸುವತ್ತ ಗಮನ ಹರಿಸಬೇಕು. ‘ಮಾನವ ನಿರ್ಮಿತ ಬಿಕ್ಕಟ್ಟಿನಿಂದ’ ಆರ್ಥಿಕತೆಯನ್ನು ಸರಿದಾರಿಗೆ ತರಲು ತಜ್ಞರ ಸಲಹೆ ಪಡೆದುಕೊಳ್ಳಬೇಕು ಎಂದು ಸಿಂಗ್‌ ಹೇಳಿದ್ದರು. ಮಾತ್ರವಲ್ಲದೆ,ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲ ವಿಚಾರಗಳನ್ನೂ ಅತ್ಯಂತ ಕೆಟ್ಟದಾಗಿ ನಿರ್ವಹಣೆ ಮಾಡಿರುವುದು ಈಗಿನ ಆರ್ಥಿಕ ಕುಸಿತಕ್ಕೆ ಕಾರಣ ಎಂದೂ ಆರೋಪಿಸಿದ್ದರು.

ADVERTISEMENT

ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರಸಂಬಿತ್‌ ಪಾತ್ರಾ, ‘ಅವರೊಬ್ಬ(ಮನಮೋಹನ್‌ ಸಿಂಗ್‌) ಅರ್ಥಶಾಸ್ತ್ರಜ್ಞ. ಆದರೆ, ಅವರ ಹಿಂದೆ ಇದ್ದ ವ್ಯಕ್ತಿಗಳು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ಉತ್ತೇಜಿಸಲು ಅವರನ್ನು ಕೈಗೊಂಬೆಯಾಗಿಸಿಕೊಂಡಿದ್ದವು. ಇದರಿಂದ ದೇಶದ ಅರ್ಥ ವ್ಯವಸ್ಥೆಗೆ ಎಷ್ಟು ಅನ್ಯಾಯವಾಗಿದೆ ಎಂಬುದು ನಮಗೆ ಗೊತ್ತಿದೆ’ ಎಂದು ಕಿಡಿಕಾರಿದ್ದಾರೆ.

‘ಮೋದಿ ಸರ್ಕಾರದ ಆರ್ಥಿಕ ನೀತಿಗಳು ದೇಶವು ವಿಶ್ವದ ಬೃಹತ್‌ ಆರ್ಥಿಕತೆಗಳಲ್ಲಿ ಒಂದಾಗಲು ಸಹಾಯ ಮಾಡಿದೆ.ವಿಶ್ವ ಆರ್ಥಿಕತೆಯೂ ಮಂದಗತಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ದೇಶದ ಅರ್ಥ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಆರ್ಥಿಕತೆಉತ್ತಮ ತಳಪಾಯ ಹೊಂದಿರುವುದೇ ಅದಕ್ಕೆ ಕಾರಣ’ ಎಂದಿದ್ದಾರೆ.

ಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐನಿಂದ ಬಿಜೆಪಿ ಮತ್ತು ಬಜರಂಗದಳ ಹಣ ಪಡೆದಿವೆ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಆರೋಪಿಸಿದ್ದರು. ಈ ಹೇಳಿಕೆಯನ್ನೂ ಖಂಡಿಸಿರುವ ಪಾತ್ರ, ದಿಗ್ವಿಜಯ್‌ ಹೇಳಿಕೆ ‘ನಾಚಿಕೆಗೇಡು’. ಇದಕ್ಕಾಗಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.