ರಕ್ಷಣಾ ಕಾರ್ಯಾಚರಣೆ
(ಪಿಟಿಐ ಚಿತ್ರ)
ಡೆಹ್ರಾಡೂನ್ (ಪಿಟಿಐ): ಉತ್ತರಾ ಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಹಿಮಕುಸಿತದಲ್ಲಿ ಸಿಲುಕಿದ್ದ ಸ್ಥಳದಿಂದ ನಾಲ್ವರು ಕಾರ್ಮಿಕರ ಮೃತದೇಹವನ್ನು ಭಾನುವಾರ ಹೊರ
ತೆಗೆಯಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, 60 ಗಂಟೆಗಳ ರಕ್ಷಣಾ ಕಾರ್ಯಾಚರಣೆಯನ್ನು ಅಧಿಕಾರಿಗಳು ಅಂತ್ಯಗೊಳಿಸಿದರು.
ಮಾಣಾ ಮತ್ತು ಬದರೀನಾಥದ ನಡುವೆ ಇರುವ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್ಒ) ಶಿಬಿರದಲ್ಲಿ ಶುಕ್ರವಾರ ಮುಂಜಾನೆ ಹಿಮಕುಸಿತ ಉಂಟಾಯಿತು. ಶಿಬಿರದಲ್ಲಿದ್ದ 8 ಕಂಟೇನರ್ಗಳು ಹಾಗೂ ಶೆಡ್ ಒಂದರಲ್ಲಿ ಒಟ್ಟು 54 ಮಂದಿ ಸಿಲುಕಿದ್ದರು. ಮೊದಲಿಗೆ 55 ಮಂದಿ ಸಿಲುಕಿದ್ದರು ಎಂದು ಅಂದಾಜಿಸಲಾಗಿತ್ತು.
ಕಾರ್ಮಿಕರೊಬ್ಬರು ಅನುಮತಿ ಪಡೆ ಯದೇ ರಜೆ ಪಡೆದು ಮನೆಗೆ ಸುರಕ್ಷಿತವಾಗಿ ಮರಳಿರುವುದು ಖಚಿತಪಟ್ಟಿದೆ.
‘ಶನಿವಾರದಿಂದ 46 ಮಂದಿಯನ್ನು ರಕ್ಷಿಸಿ, ಜ್ಯೋತಿರ್ಮಠದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಹೃಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ರಕ್ಷಿಸಿರುವವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ’ ಎಂದು ಲೆಫ್ಟಿನೆಂಟ್ ಕರ್ನಲ್ ಡಿ.ಎಸ್.ಮಾಲ್ದ್ಯಾ ತಿಳಿಸಿದರು.
‘ನಾಪತ್ತೆಯಾದ ಕಾರ್ಮಿಕರ ಪೈಕಿ ಕೊನೆಯ ವ್ಯಕ್ತಿಯ ಮೃತದೇಹ ಸಿಕ್ಕ ಬಳಿಕ ಮಾಣಾದಲ್ಲಿ ಕೈಗೊಂಡ ರಕ್ಷಣಾ ಕಾರ್ಯಾಚರಣೆ ಕೊನೆಗೊಳಿಸಲಾಯಿತು’ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ತಿಳಿಸಿದರು.
‘ಹಿಮಕುಸಿತದಿಂದ 54 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದು, 46 ಮಂದಿಯನ್ನು ರಕ್ಷಿಸಲಾಗಿದೆ. 8 ಮಂದಿಯ ಮೃತದೇಹ ದೊರೆತಿದೆ’ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ತಿಳಿಸಿದರು.
ಶನಿವಾರ ಹಾಗೂ ಭಾನುವಾರ ತಲಾ ನಾಲ್ಕು ಮೃತದೇಹಗಳು ಪತ್ತೆಯಾದವು.
200 ಮಂದಿಯಿಂದ ರಕ್ಷಣಾ ಕಾರ್ಯಾಚರಣೆ: ಹಿಮಕುಸಿತ ಸಂಭವಿಸುತ್ತಿದ್ದಂತೆ, ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಇಂಡೋ–ಟಿಬೆಟಿಯನ್ ಪಡೆ, ಬಿಆರ್ಒ, ಜಿಲ್ಲಾಡಳಿತ, ಆರೋಗ್ಯ ಹಾಗೂ ಆಗ್ನಿಶಾಮಕ ಇಲಾಖೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
‘ಸೇನೆಯ 6 ಹೆಲಿಕಾಪ್ಟರ್, ಶ್ವಾನದಳ ಹಾಗೂ ಥರ್ಮಲ್ ಇಮೇಜಿಂಗ್ ತಂತ್ರಜ್ಞಾನ ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.
ಪತ್ತೆಯಾದ ಕೊನೆಯ ಮೃತದೇಹವನ್ನು ಡೆಹ್ರಾಡೂನ್ನ ಕ್ಲೆಮೆಂಟ್ ಟೌನ್ನ ನಿವಾಸಿ ಅರವಿಂದ್ ಕುಮಾರ್ ಸಿಂಗ್ (43) ಅವರದ್ದು ಎಂದು ಗುರುತಿಸಲಾಗಿದೆ. ಉಳಿದಂತೆ ರುದ್ರಾಪುರ ಜಿಲ್ಲೆಯ ಅನಿಲ್ಕುಮಾರ್ (21), ಉತ್ತರ ಪ್ರದೇಶ ಫತೇಪುರದ ಅಶೋಕ್ (28), ಹಾಗೂ ಹಿಮಾಚಲಪ್ರದೇಶ ಉನಾದ ಹರ್ಮೇಶ್ ಎಂದು ಗುರುತಿಸಲಾಗಿದೆ.
ಮೃತದೇಹಗಳನ್ನು ಜ್ಯೋತಿರ್ಮಠದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಶವದ ಜೊತೆ 25 ತಾಸು ಕಳೆದ ಸಹೋದ್ಯೋಗಿ
‘ಕಣ್ಣು ಹಾಯಿಸಿದ್ದಷ್ಟೂ ಹಿಮ. ಕಾಲು ಮುರಿದು, ತಲೆಗೆ ಪೆಟ್ಟು ಬಿದ್ದರೂ ಹಿಮದ ರಾಶಿಯೊಳಗೆ ಸಿಲುಕಿಕೊಂಡು ದೇಹವನ್ನು ಅಲುಗಾಡಿಸಲೂ ಆಗದ ಪರಿಸ್ಥಿತಿ. ಇದೂ ಸಾಲದೆಂಬಂತೆ, ಪಕ್ಕದಲ್ಲಿಯೇ ಸಹೋದ್ಯೋಗಿಯ ಮೃತದೇಹ...’
–ಮಾಣಾದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ 25 ತಾಸುಗಳ ಕಾಲ ಸತತ ಹೋರಾಡಿ ಬದುಕುಳಿದ ಬಿಆರ್ಒ ಕಾರ್ಮಿಕ ಜಗ್ಬೀರ್ ಸಿಂಗ್ ಅವರ ಮಾತುಗಳಿವು.
ಅಮೃತಸರದ ಇವರು, ಬಿಆರ್ಒದ ಕಂಟೇನರ್ನಲ್ಲಿ ನಿದ್ರೆಗೆ ಜಾರಿದ್ದರು.
‘ಹಿಮಕುಸಿತದ ವೇಳೆ ಕಂಟೇನರ್ ನೂರಾರು ಮೀಟರ್ ಉರುಳಿಬಿದ್ದಿದ್ದರಿಂದ, ನನ್ನ ಸಹೋದ್ಯೋಗಿಯೊಬ್ಬರು ಮೃತಪಟ್ಟರು. ನನ್ನ ಜೊತೆಗಿದ್ದ 14ರಿಂದ 15 ಮಂದಿ ಒಂದೇ ಹೊದಿಕೆಯಲ್ಲಿಯೇ 25 ತಾಸು ಕಳೆದೆವು. ನೋವಿನಿಂದ ಬಳಲಿದರೂ ಏನೂ ಮಾಡಲು ಸಾಧ್ಯವಾಗಲಿಲ್ಲ’ ಎಂದರು.
‘ಹಿಮಕುಸಿತ ಸಂಭವಿಸಿದ ಕೇವಲ 10 ಸೆಕೆಂಡ್ನಲ್ಲಿಯೇ ನಾವು ಮಲಗಿದ್ದ ಕಂಟೇನರ್ 300 ಮೀಟರ್ ಕೆಳಕ್ಕೆ ಕುಸಿಯಿತು ಎಂದರೆ ಅದರೆ ತೀವ್ರತೆ ಹೇಗಿತ್ತು ಎಂಬುದನ್ನು ಅಂದಾಜಿಸಬಹುದು’ ಎಂದು ಉತ್ತರಕಾಶಿಯ ಮನೋಜ್ ಭಂಡಾರಿ ನೆನಪಿಸಿಕೊಂಡರು.
‘ಸುತ್ತಲೂ ಹಿಮ ಆವರಿಸಿದ್ದರಿಂದ ಉಸಿರಾಟಕ್ಕೂ ಕಷ್ಟಪಡುತ್ತಿದ್ದ ಯೋಧರು ಬಂದು ನಮ್ಮನ್ನು ರಕ್ಷಿಸಿದರು’ ಎಂದು ಧನ್ಯವಾದ ಸಲ್ಲಿಸಿದರು.
ಗಾಯಾಳು ಕಾರ್ಮಿಕರನ್ನು ಜ್ಯೋತಿರ್ಮಠದ ಸೇನಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಸುರಂಗ ಕುಸಿತ ಪ್ರಕರಣ:ರಕ್ಷಣೆ ಕಾರ್ಯ ಚುರುಕು
ನಾಗರ್ಕರ್ನೂಲ್,(ತೆಲಂಗಾಣ) (ಪಿಟಿಐ): ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಭಾಗದ ಸುರಂಗದಲ್ಲಿ ಸಿಲುಕಿರುವ ಎಂಟು ಕಾರ್ಮಿಕರ ರಕ್ಷಣೆಗಾಗಿ ಹೂಳು ತೆರವುಗೊಳಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ.ಸುರಂಗ ಕುಸಿದಿದ್ದರಿಂದ ಮಣ್ಣು ಸಾಗಣೆ ಮಾಡುವುದು ಕಷ್ಟವಾಗಿದೆ. ಸಾಗಣೆ ಮಾಡುವ ವ್ಯವಸ್ಥೆ ಸರಿಪಡಿಸುವ ಕೆಲಸವು ಸೋಮವಾರದ ವೇಳೆಗೆ ಮುಗಿಯುವ ನಿರೀಕ್ಷೆಯಿದೆ. ಆ ಬಳಿಕ ಹೂಳು ತೆರವುಗೊಳಿಸುವ ಪ್ರಕ್ರಿಯೆ ಇನ್ನಷ್ಟು ಸುಗಮ ಮತ್ತು ತ್ವರಿತಗತಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಖರವಾಗಿ ತಿಳಿದಿಲ್ಲ: ಕಾರ್ಮಿ ಕರು ಸಿಲುಕಿರುವ ಸ್ಥಳವನ್ನು ನಿಖರವಾಗಿ ಪತ್ತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.