ನವದೆಹಲಿ: ಕಳೆದ ವರ್ಷ ಸಂಭವಿಸಿದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಂತಹ ಪ್ರಕೃತಿ ವಿಕೋಪಗಳಿಂದ ಹಾನಿಗೊಳಗಾದ ಬಿಹಾರ, ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಪುದುಚೇರಿಗೆ ಕೇಂದ್ರವು ₹1,280.35 ಕೋಟಿ ಹೆಚ್ಚುವರಿ ನೆರವನ್ನು ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಪರಿಹಾರ ಮೊತ್ತವನ್ನು ಅನುಮೋದಿಸಿದೆ.
ಒಟ್ಟು ₹1,280.35 ಕೋಟಿ ಆರ್ಥಿಕ ನೆರವಿನಲ್ಲಿ ಬಿಹಾರಕ್ಕೆ ₹588.73 ಕೋಟಿ, ಹಿಮಾಚಲ ಪ್ರದೇಶಕ್ಕೆ ₹136.2 ಕೋಟಿ, ತಮಿಳುನಾಡಿಗೆ ₹522.34 ಕೋಟಿ ಮತ್ತು ಪುದುಚೇರಿಗೆ ₹33.06 ಕೋಟಿ ನೆರವನ್ನು ಅನುಮೋದಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್ಎಫ್) ಅಡಿಯಲ್ಲಿ ಬಿಹಾರ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ₹1,247 ಕೋಟಿ ಮತ್ತು ಎಸ್ಡಿಆರ್ಎಫ್ನಲ್ಲಿ ಲಭ್ಯವಿರುವ ವರ್ಷದ ಆರಂಭಿಕ ಬಾಕಿಯ ಶೇ.50ರಷ್ಟು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ₹33.06 ಕೋಟಿ ಆರ್ಥಿಕ ನೆರವನ್ನು ಸಮಿತಿ ಅನುಮೋದಿಸಿದೆ.
ಕಳೆದ ವರ್ಷ ಪ್ರಕೃತಿ ವಿಕೋಪಗಳಿಗೆ ತುತ್ತಾದ ಕೇಂದ್ರಾಡಳಿತ ಪ್ರದೇಶ ಪುದುಚೇರಿ, ಬಿಹಾರ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೆರವಾಗಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.