ADVERTISEMENT

ರೈತರ ದಿಕ್ಕು ತಪ್ಪಿಸಲು ಯತ್ನ: ರಾಹುಲ್‌ ವಿರುದ್ಧ ಗೋಯಲ್, ಚೌಹಾಣ್ ಕಿಡಿ

ಪಿಟಿಐ
Published 13 ಫೆಬ್ರುವರಿ 2026, 2:44 IST
Last Updated 13 ಫೆಬ್ರುವರಿ 2026, 2:44 IST
<div class="paragraphs"><p>ಗೋಯಲ್,&nbsp;ರಾಹುಲ್‌.&nbsp;ಚೌಹಾಣ್ </p></div>

ಗೋಯಲ್, ರಾಹುಲ್‌. ಚೌಹಾಣ್

   

ನವದೆಹಲಿ: ಭಾರತ– ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಲೋಕಸಭೆಯ ವಿರೋಧ ‍ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ, ಅನ್ನದಾತರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಭಾರತ–ಅಮರಿಕ ಒಪ್ಪಂದದಲ್ಲಿ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲಾಗಿದೆ. ರಾಹುಲ್ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ರೈತರನ್ನು ದಾರಿ ತಪ್ಪಿಸುವ, ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಹು‌ಲ್‌ಗೆ ಮಾತೃಭೂಮಿಯ ಬಗ್ಗೆ ಕಾಳಜಿ ಇಲ್ಲ. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಅವರು ಕೈಜೋಡಿಸುತ್ತಾರೆ ಎಂಬುವುದು ಸುಳ್ಳು ಎಂದು ‌ಕುಟುಕಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಗ್ಗೆ ಸದಾ ಸಹಾನುಭೂತಿ ಹೊಂದಿದ್ದಾರೆ. ರೈತರ ಅಭಿವೃದ್ಧಿಗಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಗೋಯಲ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಒಬ್ಬ ಸುಳ್ಳುಗಾರ. ಅವರಿಗೆ ದೇಶ ಮತ್ತು ರೈತರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ರೈತರ ಸಬಲೀಕರಣ ಇಷ್ಟವಿಲ್ಲ. ರಾಹುಲ್ ಯಾವಾಗಲೂ ದೇಶ ವಿರೋಧಿ ಮಾತುಗಳನ್ನೇ ಹೇಳುತ್ತಾರೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕಿಡಿಕಾರಿದ್ದಾರೆ.

ಮೋದಿ ಅವರು ರೈತರ ಹಿತದೃಷ್ಟಿಯಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ನಿರ್ಧಾರವನ್ನೂ ತೆಗೆದುಕೊಳ್ಳುತ್ತಾರೆ. ಮೋದಿ ನಾಯಕತ್ವದಲ್ಲಿ ಪ್ರಾರಂಭವಾದ ಯೋಜನೆಗಳು ರೈತರ ಜೀವನವನ್ನು ಬದಲಾಯಿಸಿವೆ ಎಂದು ಚೌಹಾಣ್ ಪ್ರತಿಪಾದಿಸಿದರು.

ಭಾರತ– ಅಮೆರಿಕ ನಡುವೆ ನಡೆದ ಒ‍ಪ್ಪಂದದಲ್ಲಿ ದೇಶದ ರೈತರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿರುವ ರಾಹುಲ್, ಮೋದಿ ಅವರು ಡೊನಾಲ್ಡ್ ಟ್ರಂಪ್ ಹಿಡಿತದಲ್ಲಿದ್ದಾರೆ, ಉಸಿರುಗಟ್ಟಿಸುವ ವಾತಾವರಣದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.