ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಕೂಚ್ ಬಿಹಾರ್ ಘರ್ಷಣೆಯ ತನಿಖೆ ಕೈಗೆತ್ತಿಕೊಂಡ ಸಿಐಡಿ

ಪಿಟಿಐ
Published 16 ಏಪ್ರಿಲ್ 2021, 11:29 IST
Last Updated 16 ಏಪ್ರಿಲ್ 2021, 11:29 IST
ಘಟನೆ ನಡೆದ ಸೀತಾಲಕುಚಿ ಮತಗಟ್ಟೆ ಪ್ರದೇಶ – ಪಿಟಿಐ ಸಂಗ್ರಹ ಚಿತ್ರ
ಘಟನೆ ನಡೆದ ಸೀತಾಲಕುಚಿ ಮತಗಟ್ಟೆ ಪ್ರದೇಶ – ಪಿಟಿಐ ಸಂಗ್ರಹ ಚಿತ್ರ   

ಕೋಲ್ಕತ್ತ: ಕೂಚ್‌ ಬಿಹಾರ್‌ನ ಸೀತಾಲಕುಚಿಯಲ್ಲಿ ಮತದಾನದ ಸಂದರ್ಭ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟ ಬಗ್ಗೆ ಪಶ್ಚಿಮ ಬಂಗಾಳ ಸಿಐಡಿ ತನಿಖೆ ಕೈಗೆತ್ತಿಕೊಂಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಗಾಗಿ ಅಪರಾಧ ತನಿಖಾ ದಳವು (ಸಿಐಡಿ) ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ತನಿಖಾ ತಂಡವು ಸೀತಾಲಕುಚಿಯ ಜೋರ್‌ಪಕ್ತಿಯಲ್ಲಿನ 126/5ನೇ ಮತಗಟ್ಟೆಗೆ ಭೇಟಿ ನೀಡಲಿದೆ. ಸಾಕ್ಷಿಗಳಿಂದ ಮಾಹಿತಿ ಕಲೆಹಾಕಲಿರುವ ತನಿಖಾ ತಂಡವು ವಿಡಿಯೊ ದೃಶ್ಯಾವಳಿಯನ್ನೂ ಪರಿಶೀಲಿಸಲಿದೆ. ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊದ ಸತ್ಯಾಸತ್ಯತೆ ಅರಿಯಲು ವಿಧಿವಿಜ್ಞಾನ ಪ್ರಯೋಗಕ್ಕೂ ಕಳುಹಿಸಿಕೊಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ಸ್ಥಳಕ್ಕೆ ಧಾವಿಸಿದ್ದ ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಂದಲೂ ತನಿಖಾ ತಂಡ ಮಾಹಿತಿ ಕಲೆಹಾಕಲಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ನಾಲ್ಕನೇ ಹಂತದ ಮತದಾನದ ಸಂದರ್ಭ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿ ‘ಸ್ವರಕ್ಷಣೆ’ಗಾಗಿ ನಡೆಸಿದ ಗೋಲಿಬಾರ್‌ನಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ ಮತದಾನ ಮುಂದೂಡಿಕೆ ಮಾಡಲಾಗಿತ್ತು. ಘಟನೆಯು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.