ADVERTISEMENT

‘ಮಹಾ’ ಚುನಾವಣಾ ಅಕ್ರಮ: ಮಾಜಿ ಸಿಎಂ ಚವಾಣ್‌ ನೇತೃತ್ವದ ಸಮಿತಿ ರಚಿಸಿದ ಕಾಂಗ್ರೆಸ್‌

‘ಮಹಾ’ ಚುನಾವಣೆಯಲ್ಲಿ ‘ಅಕ್ರಮ’ಗಳ ವಿಶ್ಲೇಷಣೆ ಉದ್ದೇಶ

ಪಿಟಿಐ
Published 1 ಜುಲೈ 2025, 15:55 IST
Last Updated 1 ಜುಲೈ 2025, 15:55 IST
ಪೃಥ್ವಿರಾಜ್‌ ಚವಾಣ್
ಪೃಥ್ವಿರಾಜ್‌ ಚವಾಣ್   

ನವದೆಹಲಿ: ‘ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ‘ಅಕ್ರಮ’ಗಳ ಕುರಿತು ಸಮಗ್ರ ವಿಶ್ಲೇಷಣೆ ನಡೆಸುವುದಕ್ಕಾಗಿ ಪಕ್ಷವು ನನ್ನ ನೇತೃತ್ವದಲ್ಲಿ ಸಮಿತಿ ರಚಿಸಿದೆ’ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಮಂಗಳವಾರ ಹೇಳಿದ್ದಾರೆ.

‘ಸಮಿತಿಯು ‘ಅಕ್ರಮ’ಗಳ ವಿಶ್ಲೇಷಣೆ ನಡೆಸುವ ಜೊತೆಗೆ, ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡಲಿದೆ’ ಎಂದು ತಿಳಿಸಿದ್ದಾರೆ. 

‘ಮಹಾ ವಿಕಾಸ ಅಘಾಡಿ(ಎಂವಿಎ) ಮೈತ್ರಿಕೂಟದ 100 ಜನ ನಾಯಕರು ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ಧಾರೆ. ಈ ನಾಯಕರಿಗೆ ನೆರವು ನೀಡುವುದಕ್ಕಾಗಿ ದೆಹಲಿಯಿಂದ ಕಾನೂನು ತಂಡವೊಂದನ್ನು ಕಳುಹಿಸುವಂತೆ ಪಕ್ಷದ ವರಿಷ್ಠರಿಗೆ ಸಮಿತಿ ಮನವಿ ಮಾಡಿದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ADVERTISEMENT
ಚುನಾವಣಾ ಆಯೋಗದ ಅವಹೇಳನ ನನ್ನ ಉದ್ದೇಶವಲ್ಲ. ಆದರೆ ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣಕ್ಕೆ ಅವಕಾಶ ಇದೆ
ಪೃಥ್ವಿರಾಜ್‌ ಚವಾಣ್, ಕಾಂಗ್ರೆಸ್‌ ನಾಯಕ

‘ನನ್ನ ಕ್ಷೇತ್ರ ಕರಾಡ್ ದಕ್ಷಿಣ ಸೇರಿ ಮಹಾರಾಷ್ಟ್ರದ ಹಲವು ಕ್ಷೇತ್ರಗಳಲ್ಲಿ ಜನರು ಅಳಿಸಲಾಗದ ಶಾಯಿಯನ್ನು ತೆಗೆದು ಹಾಕಿ, ಹಲವು ಬಾರಿ ಮತದಾನ ಮಾಡಿದ್ದಾರೆ’ ಎಂದು ಚವಾಣ್‌ ದೂರಿದ್ದಾರೆ.

‘ಮತಪತ್ರ ಬಳಸುವ ಚುನಾವಣಾ ಪ್ರಕ್ರಿಯೆಯನ್ನು ಮತ್ತೆ ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದು ಸಮಿತಿ ಮುಂದಿರುವ ಕಾರ್ಯಸೂಚಿಯ ಪ್ರಮುಖ ಅಂಶ. ಈ ಕುರಿತು ಸಮಿತಿಯು ಜನರೊಂದಿಗೆ ಮಾತನಾಡಿ, ಶಿಫಾರಸು ಮಾಡಲಿದೆ’ ಎಂದು ಹೇಳಿದ್ದಾರೆ.

‘ದೆಹಲಿಯಲ್ಲಿ ಸೋಮವಾರ ಸರಣಿ ಸಭೆಗಳು ನಡೆದವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡುವಿನ ಐದು ತಿಂಗಳ ಅವಧಿಯಲ್ಲಿ 41 ಲಕ್ಷ ಹೊಸ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನೇ ಗಟ್ಟಿಯಾಗಿ ಮಂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದೂ ಚವಾಣ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.