ನವದೆಹಲಿ: ಸರ್ಕಾರದ 'ದೋಷಪೂರಿತ' ನೀತಿಗಳಿಂದಾಗಿ ಅಡುಗೆ ಎಣ್ಣೆ ಬೆಲೆಗಳು 'ಗಗನಕ್ಕೇರುತ್ತಿವೆ' ಮತ್ತು ಅದರಿಂದಾಗಿ ಹಬ್ಬದ ಕಳೆಯೇ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನಾಥೆಮಾತನಾಡಿ, ಜನರು ಈಗಾಗಲೇ ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಬೆಲೆಗಳ ಹೆಚ್ಚಳದಿಂದಾಗಿ 'ಹೆಣಗಾಡುತ್ತಿದ್ದಾರೆ' ಮತ್ತು ಈಗ ಹಬ್ಬಗಳ ಸಮಯದಲ್ಲಿ ಅವರು ಅಡುಗೆ ಎಣ್ಣೆಯ ಬೆಲೆ ಹೆಚ್ಚಳದಿಂದ ಪರದಾಡುವಂತಾಗಿದೆ. ಕೇಂದ್ರ ಸರ್ಕಾರದ ವೈಫಲ್ಯಗಳಿಂದಾಗಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರುತ್ತಿದೆ ಎಂದು ತಿಳಿಸಿದ್ದಾರೆ.
ಈ ಸರ್ಕಾರದ 'ದೋಷಪೂರಿತ' ನೀತಿಗಳಿಂದಾಗಿ ಸೋಯಾ ಬೀನ್ ಎಣ್ಣೆ, ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆಯ ಬೆಲೆಗಳು ಏರಿಕೆಯಾಗಿವೆ. ಭಾರತದಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರೂ ಎಣ್ಣೆಯನ್ನು ಬಳಸುತ್ತಾರೆ. ಆದ್ದರಿಂದ ಬಡ ವ್ಯಕ್ತಿಯಿಂದ ಶ್ರೀಮಂತನವರೆಗೆ ಇರುವ ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲ ಎಂದು ಅವರು ಆರೋಪಿಸಿದರು.
ಅವರು (ಸರ್ಕಾರ) ಇದನ್ನು ನೋಡಿಕೊಳ್ಳಬೇಕು. ನೀವು ಮೂಲ ಸರಕುಗಳು ಕೈಗೆಟುಕುವಂತೆ ಮಾಡುತ್ತಿಲ್ಲ. ನೀವು ಭಾರತದಲ್ಲಿ ಮೂಲ ಸರಕುಗಳನ್ನು ಕೈಗೆಟುಕದಂತೆ ಮಾಡಿದ್ದೀರಿ. ಮೊದಲಿಗಿಂತ ಹೆಚ್ಚಿನ ಬೆಲೆಗಳಿಂದಾಗಿ ಬಡವರಿಗೆ 'ಎರಡು ಪಟ್ಟು ಹೊಡೆತ' ಉಂಟಾಗಿದೆ. ಈಗ ಬೆಲೆ ಏರಿಕೆಯು ಉಂಟಾಗಿದ್ದು, ಉದ್ಯೋಗ ನಷ್ಟ ಮತ್ತು ವೇತನ ಕಡಿತವು ಮೊದಲಿನಿಂದಲೇ ಇದೆ ಎಂದು ದೂರಿದ್ದಾರೆ.
ಈ ಸರ್ಕಾರವು ಅಸಮರ್ಥ ಮತ್ತು ಅನೈತಿಕತೆಯಿಂದ ಕೂಡಿದೆ ಎಂದು ನಾವು ಕರೆಯುತ್ತೇವೆ. ಯುಪಿಎ ಸರ್ಕಾರವು ಒಂದು ದೊಡ್ಡ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು, ಆದರೆ ಈ ಸರ್ಕಾರವು ಅದನ್ನು ತನ್ನ ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯಲಿಲ್ಲ ಮತ್ತು ಅದಕ್ಕಾಗಿಯೇ ಅಡುಗೆ ಎಣ್ಣೆಗಳ ಬೆಲೆ ಶೇ 33 ರಿಂದ 50ರವರೆಗೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.