ADVERTISEMENT

‌ಕೊರೊನಾ ಹರಡುವ ಭೀತಿ: ಸಾಮಾನ್ಯ ರೈಲು ಸಂಚಾರಕ್ಕೆ ಆನೇಕ ರಾಜ್ಯಗಳ ವಿರೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2020, 3:10 IST
Last Updated 29 ಮೇ 2020, 3:10 IST
   

ನವದೆಹಲಿ: ಜೂನ್ ಒಂದರಿಂದ 100 ಜೋಡಿ ಪ್ಯಾಸೆಂಜರ್ ರೈಲುಗಳ ಸಂಚಾರ ಪುನರಾರಂಭಿಸುವ ಭಾರತೀಯ ರೈಲ್ವೆಯ ಯೋಜನೆಗೆ ಅನೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಸಾಮಾನ್ಯ ರೈಲುಗಳ ಸಂಚಾರ ಭಾಗಶಃ ಪುನರಾರಂಭದಿಂದ ಕೊರನಾ ವೈರಸ್ ಸೋಂಕು ಹರಡುವಿಕೆ ಹೆಚ್ಚಾಗಬಹುದು ಎಂದು ರಾಜ್ಯಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಸಾಮಾನ್ಯ ರೈಲು ಸಂಚಾರ ಭಾಗಶಃ ಪುನರಾರಂಭವನ್ನು ಕನಿಷ್ಠ ಒಂದು ತಿಂಗಳವರೆಗೆ ತಡೆಹಿಡಿಯುವಂತೆ ಪಶ್ಚಿಮ ಬಂಗಾಳ, ಛತ್ತೀಸಗಡ, ಬಿಹಾರ, ರಾಜಸ್ಥಾನ ಹಾಗೂ ಒಡಿಶಾ ಮನವಿ ಮಾಡಿವೆ.

ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಮರಳಿಸುವ ಸಲುವಾಗಿ ‘ಶ್ರಮಿಕ್ ವಿಶೇಷ ರೈಲು’ಗಳನ್ನು ಓಡಿಸುವುದಕ್ಕೆ ಅಭ್ಯಂತರವಿಲ್ಲ. ಆದರೆ ಪ್ಯಾಸೆಂಜರ್ ರೈಲುಗಳ ಭಾಗಶಃ ಪುನರಾರಂಭಕ್ಕೆ ಸಮ್ಮತಿ ಇಲ್ಲ ಎಂದು ಈ ರಾಜ್ಯಗಳು ಹೇಳಿವೆ.

ADVERTISEMENT

ವಲಸೆ ಕಾರ್ಮಿಕರು ಅನೇಕ ರಾಜ್ಯಗಳಿಂದ ಹಿಂದಿರುಗಿರುವುದು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಈಗಾಗಲೇ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದಾರೆ. ಕೊರೊನಾ ಸೋಂಕಿತರ ಚಿಕಿತ್ಸೆ, ಸೋಂಕು ಪತ್ತೆ ಪರೀಕ್ಷೆ ನಡೆಸುವುದು ರಾಜ್ಯಗಳಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ರೈಲುಗಳ ಓಡಾಟವೂ ಆರಂಭವಾದರೆ ವೈದ್ಯಕೀಯ ಕ್ಷೇತ್ರದ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಯಾಗಲಿದೆ ಎಂದು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.