ನವದೆಹಲಿ: ‘ಕೊರೊನಾ ವೈರಸ್ ಮನುಷ್ಯನ ದೇಹದ ಮೇಲೆ ಮಾತ್ರ ದುಷ್ಪರಿಣಾಮ ಬೀರುತ್ತದೆ. ಕೋಮು ವೈರಾಣು ವ್ಯಕ್ತಿಯ ವಿವೇಚನೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಮಂಗಳವಾರ ಹೇಳಿದ್ದಾರೆ.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ವಿವೇಚನಾರಹಿತ ರಾಜಕಾರಣದಿಂದ ಸಿಗುವ ಲಾಭ ಅಲ್ಪಕಾಲ ಇರುತ್ತದೆ. ಆದರೆ, ಅದರಿಂದಾಗುವ ಹಾನಿ ಶಾಶ್ವತ’ ಎಂದಿದ್ದಾರೆ.
‘ಮಣಿಪುರ ಮತ್ತೆ ಹೊತ್ತಿ ಉರಿಯುತ್ತಿದೆ. ಕೆಲ ದಿನಗಳ ಹಿಂದೆ ಸಂಭವಿಸಿದ ಘರ್ಷಣೆಗಳಲ್ಲಿ 70 ಮಂದಿ ಸತ್ತು, 200 ಜನರು ಗಾಯಗೊಂಡಿದ್ದರು. ಕೋಮು ವೈರಸ್ ಪ್ರಸರಣವಾದರೆ ಅವರಿಂದಾಗುವ ಪರಿಣಾಮಗಳನ್ನು ಕಲ್ಪನೆ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.
ಮಾಜಿ ಶಾಸಕ ಸೇರಿ ನಾಲ್ವರು ಶಸ್ತ್ರಧಾರಿಗಳು ಬಲವಂತದಿಂದ ಸೋಮವಾರ ಅಂಗಡಿಗಳನ್ನು ಬಂದ್ ಮಾಡಿಸಿದ್ದರು. ಇದರ ಬೆನ್ನಲ್ಲೇ, ಗುಂಪೊಂದು ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಘರ್ಷಣೆ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ. ಸೇನೆ ಮತ್ತು ಅಸ್ಸಾಂ ರೈಫಲ್ಸ್ನ 10 ಸಾವಿರದಷ್ಟು ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.