ADVERTISEMENT

ರಾಮದೇವ್‌ ಬಹಿರಂಗ ಚರ್ಚೆಗೆ ಬರಲಿ: ಭಾರತೀಯ ವೈದ್ಯಕೀಯ ಮಂಡಳಿ ಸವಾಲು

ಏಜೆನ್ಸೀಸ್
Published 29 ಮೇ 2021, 7:57 IST
Last Updated 29 ಮೇ 2021, 7:57 IST
ಯೋಗಗುರು ರಾಮದೇವ್
ಯೋಗಗುರು ರಾಮದೇವ್   

ಡೆಹ್ರಾಡೂನ್ (ಉತ್ತರಾಖಂಡ): ಅಲೋಪಥಿ ಮತ್ತು ವೈಜ್ಞಾನಿಕ ವೈದಕೀಯ ಪದ್ಧತಿಯ ವಿರುದ್ಧ ಹೇಳಿಕೆಯನ್ನು ನೀಡಿರುವ ಯೋಗಗುರು ರಾಮದೇವ್ ಅವರಿಗೆ ಉತ್ತರಾಖಂಡದ ಭಾರತೀಯ ವೈದ್ಯಕೀಯ ಮಂಡಳಿಯು (ಐಎಂಎ) ಸಾರ್ವಜನಿಕ ವೇದಿಕೆಯಲ್ಲಿ ಮುಕ್ತ ಚರ್ಚೆಗೆ ಆಹ್ವಾನಿಸುವ ಮೂಲಕ ಸವಾಲೆಸೆದಿದೆ.

ಅಲೋಪಥಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯವಿದೆಯೇ ಎಂಬುದನ್ನು ಪ್ರಶ್ನಿಸಿದ್ದ ರಾಮದೇವ್, ಈ ಚಿಕಿತ್ಸಾ ವಿಧಾನದಿಂದ ಲಕ್ಷಾಂತರ ಮಂದಿ ಸಾಯುವಂತಾಗಿದೆ ಎಂದು ಆರೋಪಿಸಿದ್ದರು.

ರಾಮದೇವ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಉತ್ತರಾಖಂಡದ ಐಎಂಎ ಅಧ್ಯಕ್ಷ ಡಾ. ಅಜಯ್ ಖನ್ನಾ, ಯೋಗಗುರು ಹೇಳಿಕೆಯು ಉದ್ಧಟತನ, ಬೇಜವಾಬ್ದಾರಿ ಮತ್ತು ಸ್ವಾರ್ಥದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಎಲೆಕ್ಟ್ರಾನಿಕ್ ಹಾಗೂ ಮಾಧ್ಯಮ ಮಿತ್ರರಸಮ್ಮುಖದಲ್ಲಿ ಐಎಂಎ ಹಾಗೂ ಪತಂಜಲಿ ಯೋಗಪೀಠದ ನಡುವೆ ಬಹಿರಂಗ ಚರ್ಚೆ ನಡೆಯಲಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಆರೋಗ್ಯಕರ ಚರ್ಚೆ, ದಿನಾಂಕ ಮತ್ತು ಸಮಯವನ್ನು ನಿರ್ಧರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಆದಾಗ್ಯೂ ಸ್ಥಳವನ್ನು ನಾವು ನಿರ್ಧರಿಸಲಿದ್ದೇವೆ ಎಂದು ತಿಳಿಸಿದೆ.

ರಾಮದೇವ್ ಹೇಳಿಕೆಯಿಂದಾಗಿ ಅಲೋಪಥಿ ಹಾಗೂ ಆಯುರ್ವೇದ ನಡುವಣ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದೆ. ಹಾಗಾಗಿ ಇದನ್ನು ಮರು ಸ್ಥಾಪಿಸಬೇಕಿದೆ. ಮಗದೊಂದು ಪತ್ರದಲ್ಲಿ ಪತಂಜಲಿ ಔಷಧಿಯನ್ನು ಯಾವೆಲ್ಲ ಆಸ್ಪತ್ರೆಗಳಲ್ಲಿ ಬಳಕೆ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಕೋರಲಾಗಿದೆ.

ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ತಪ್ಪಾದ ಅಭಿಯಾನ ನಡೆಸುತ್ತಿರುವ ರಾಮದೇವ್ ವಿರುದ್ದ ದೇಶದ್ರೋಹ ಆರೋಪದ ಅಡಿಯಲ್ಲಿ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಐಎಂಎ ಆಗ್ರಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.