ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮಾತನಾಡಿದರು.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾನು ಅಧಿಕಾರಕ್ಕೆ ಬಂದಲ್ಲಿ ‘ಜೀವನ ರಕ್ಷಾ ಯೋಜನೆ’ಯಡಿ ₹ 25 ಲಕ್ಷ ಮೊತ್ತದ ಆರೋಗ್ಯ ವಿಮೆ ಒದಗಿಸಲಾಗುವುದು ಎಂದು ಕಾಂಗ್ರೆಸ್ ಬುಧವಾರ ಭರವಸೆ ನೀಡಿದೆ.
ಪಕ್ಷದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವ ವೇಳೆ, ಯೋಜನೆ ಕುರಿತು ಮಾಹಿತಿ ನೀಡಿದ ಪಕ್ಷದ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ ಗೆಹಲೋತ್, ‘ಈ ಆರೋಗ್ಯ ವಿಮೆ ಯೋಜನೆಯು ‘ಗೇಮ್ ಚೇಂಜರ್’ ಆಗಲಿದೆ’ ಎಂದರು.
‘ಗಂಭೀರ ಆರೋಗ್ಯ ಸಮಸ್ಯೆ, ಆಸ್ಪತ್ರೆಗೆ ದಾಖಲು ಹಾಗೂ ಚಿಕಿತ್ಸೆ ಸೇರಿದಂತೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಈ ಯೋಜನೆ ನೀಡುವುದು. ಇದು ದೆಹಲಿ ನಿವಾಸಿಗಳ ಆರೋಗ್ಯ ಕುರಿತು ಪಕ್ಷ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ’ ಎಂದರು.
‘ಹೋಗಿ ಹರ್ ಜರೂರತ್ ಪೂರಿ, ಕಾಂಗ್ರೆಸ್ ಹೈ ಜರೂರಿ’ ಎಂಬ ಪಕ್ಷದ ಘೋಷಣೆ ಉಳ್ಳ ಫಲಕಗಳನ್ನು, ಈ ಯೋಜನೆ ಪ್ರಕಟಿಸುವ ವೇಳೆ ವ್ಯಾಪಕವಾಗಿ ಪ್ರದರ್ಶಿಸಲಾಗಿತ್ತು.
ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚುತ್ತಿದೆ. ದೇಶದ ಹಿತದೃಷ್ಟಿಯಿಂದಲೂ ಇಂತಹ ಬೆಳವಣಿಗೆ ಅಗತ್ಯ ಅಶೋಕ ಗೆಹಲೋತ್ ಕಾಂಗ್ರೆಸ್ನ ಹಿರಿಯ ನಾಯಕ
ಎಎಪಿ ನಮ್ಮ ಎದುರಾಳಿ: ಕಾಂಗ್ರೆಸ್
ದೆಹಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ‘ಇಂಡಿಯಾ’ ಒಕ್ಖೂಟದ ಅಂಗಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ಯುದ್ಧ ತೀವ್ರಗೊಂಡಿದೆ. ‘ಎಎಪಿ ನಮ್ಮ ಎದುರಾಳಿ. ದೆಹಲಿಯಲ್ಲಿ ಎರಡು ಬಾರಿ ಗೆದ್ದಿರುವ ಎಎಪಿ ಇನ್ನೂ ಭ್ರಮೆಯಲ್ಲಿದೆ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ ಗೆಹಲೋತ್ ಕುಟುಕಿದ್ದಾರೆ. ಪಕ್ಷದ ಪ್ರಣಾಳಿಕೆ ಬಿಡುಗಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹಲೋತ್ ‘ದೆಹಲಿಯಲ್ಲಿ ಪಕ್ಷ ಉತ್ತಮವಾಗಿ ಪ್ರಚಾರ ನಡೆಸುತ್ತಿದ್ದು ಜನರ ಒಲವು ನಮ್ಮ ಪರ ವ್ಯಕ್ತವಾಗುತ್ತಿದೆ. ಈ ಬಾರಿ ಪಕ್ಷ ಉತ್ತಮ ಸಾಧನೆ ಮಾಡುವ ವಿಶ್ವಾಸ ಇದೆ’ ಎಂದರು. ಇದಕ್ಕೆ ತಿರುಗೇಟು ನೀಡಿರುವ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‘ಕಾಂಗ್ರೆಸ್ ಹಾಗೂ ಬಿಜೆಪಿ ಜಂಟಿಯಾಗಿ ಈ ಚುನಾವಣೆ ಎದುರಿಸುತ್ತಿವೆ ಎಂಬುದು ಕಾಂಗ್ರೆಸ್ ನಾಯಕನ ಈ ಸ್ಪಷ್ಟೀಕರಣವೇ ಖಚಿತಪಡಿಸಿದೆ’ ಎಂದು ಹೇಳಿದ್ದಾರೆ. ‘ನಮ್ಮ ಪಕ್ಷವೇ ಕಾಂಗ್ರೆಸ್ನ ಎದುರಾಳಿ. ಬಿಜೆಪಿ ಕಾಂಗ್ರೆಸ್ ಮಿತ್ರ ಪಕ್ಷ ಎಂಬ ಭಾವನೆ ದೆಹಲಿ ಜನರಲ್ಲಿಯೂ ಮೂಡಿದೆ’ ಎಂದಿದ್ದಾರೆ. ‘ಈ ವರೆಗೆ ನಿಮ್ಮಿಬ್ಬರ ನಡುವಿನ ಸಹಕಾರ ರಹಸ್ಯವಾಗಿಯೇ ಇತ್ತು. ಇವತ್ತು ಬಹಿರಂಗವಾಗಿದೆ. ಈ ಸ್ಪಷ್ಟೀಕರಣ ನೀಡಿರುವುದಕ್ಕಾಗಿ ನಿಮಗೆ ದೆಹಲಿ ಜನರ ಪರವಾಗಿ ಧನ್ಯವಾದಗಳು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.