ADVERTISEMENT

Delimitation | ಮದ್ಯ ಹಗರಣದಿಂದ ಗಮನ ಬೇರೆಡೆ ಸೆಳೆಯಲು DMK ಯತ್ನ: ಕೇಂದ್ರ ಸಚಿವ

ಪಿಟಿಐ
Published 22 ಮಾರ್ಚ್ 2025, 11:31 IST
Last Updated 22 ಮಾರ್ಚ್ 2025, 11:31 IST
 ಬಂಡಿ ಸಂಜಯ್‌ ಕುಮಾರ್‌
 ಬಂಡಿ ಸಂಜಯ್‌ ಕುಮಾರ್‌   

ಹೈದರಾಬಾದ್: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಎದುರಿಸುತ್ತಿರುವ ‘ಮದ್ಯ ಹಗರಣ’ದ ಆರೋಪಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಚೆನ್ನೈನಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಭೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಬಂಡಿ ಸಂಜಯ್‌ ಕುಮಾರ್‌ ಹೇಳಿದ್ದಾರೆ.

ಕರೀಂನಗರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕ್ಷೇತ್ರ ಪುನರ್‌ ವಿಂಗಡನೆ ವಿಧಾನಗಳನ್ನು ಅಂತಿಮಗೊಳಿಸಿಲ್ಲ. ದಕ್ಷಿಣ ರಾಜ್ಯಗಳ ಸ್ಥಾನಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ₹1,000 ಕೋಟಿ ಮದ್ಯ ಹಗರಣದ ಆರೋಪಗಳನ್ನು ಎದುರಿಸುತ್ತಿದೆ. ಈ ಕುರಿತು ಜನರ ಗಮನವನ್ನು ಬೇರೆಡೆ ಸೆಳೆಯಲು ಸ್ಪಷ್ಟ ಯೋಜನೆಯ ಪ್ರಕಾರ ಇದೆಲ್ಲವನ್ನೂ ಮಾಡಲಾಗುತ್ತಿದೆ. ಪಕ್ಷದ ವಿರುದ್ಧ ಜನರು ತಮ್ಮ ತೀರ್ಪು ನೀಡಲು ಸಿದ್ಧರಿದ್ದಾರೆ ಎಂದು ಸಂಜಯ್‌ ಹೇಳಿದ್ದಾರೆ.

ADVERTISEMENT

ಸಭೆಯಲ್ಲಿ ಭಾಗವಹಿಸಿರುವ ಎಲ್ಲಾ ಪಕ್ಷಗಳ ನಾಯಕರು ಭ್ರಷ್ಟರಾಗಿದ್ದು, ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಸಭೆಯು ಕಳ್ಳರ ಗುಂಪು ಒಟ್ಟಿಗೆ ಸೇರಿದಂತಿದೆ. ಎಲ್ಲಾ ಪಕ್ಷಗಳು ಸೇರಿ ಬಿಜೆಪಿಗೆ ಮಸಿ ಬಳಿಯಲು ಪಿತೂರಿ ನಡೆಸುತ್ತಿವೆ ಎಂದು ಸಂಜಯ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಎರಡೂ ಪಕ್ಷಗಳು ಪರಸ್ಪರ ಒಪ್ಪಂದದೊಂದಿಗೆ ಚೆನ್ನೈಗೆ ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಸಂಬಂಧಿಸಿದಂತೆ ರಾಜ್ಯಗಳ ಮೇಲೆ ಬೀರುವ ಪರಿಣಾಮ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಭೆ ಕರೆದಿದ್ದರು.

ಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ. ಮಹೇಶ್ ಕುಮಾರ್ ಗೌಡ, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.