ADVERTISEMENT

ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಆಲೋಚನೆ ಬೇಡ: ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:38 IST
Last Updated 6 ಡಿಸೆಂಬರ್ 2019, 13:38 IST
ಎಸ್‌ ಸುರೇಶ್‌ ಕುಮಾರ್‌
ಎಸ್‌ ಸುರೇಶ್‌ ಕುಮಾರ್‌   

ಬೆಂಗಳೂರು: ಪದವಿಪೂರ್ವ ಶಿಕ್ಷಣ‌ ಇಲಾಖೆಯ ಉಪನ್ಯಾಸಕರು, ಪ್ರಾಂಶುಪಾಲರುಗಳ‌ ಹಲವು ಬೇಡಿಕೆಗಳನ್ನು ಈಡೇರಿಸಲು‌ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದುಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶುಕ್ರವಾರ ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ವಿವಿಧ‌ ಪ್ರಾಂಶುಪಾಲರ, ಉಪನ್ಯಾಸಕರು ಹಾಗೂ ಇತರೆ ಸಂಘಟನೆಗಳೊಂದಿಗೆ ನಡೆಸಿದ ಸಭೆಯಲ್ಲಿ‌ ಅವರು ಮಾತನಾಡಿದರು.ಯಾವುದೇ ಸಂಘಟನೆಗಳು ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ಆಲೋಚನೆ ಮಾಡಬಾರದು. ಇಂತಹ ನಿರ್ಣಯಗಳು ಸಾಮಾಜಿಕವಾಗಿ ನಕಾರಾತ್ಮಕ ಸಂದೇಶ ರವಾನಿಸುತ್ತವೆ ಆದ್ದರಿಂದ ಭವ್ಯ ಭವಿಷ್ಯದ ಕನಸನ್ನು ಹೊತ್ತ‌ ವಿದ್ಯಾರ್ಥಿಗಳ ಹಿತ ಕಾಯುವುದು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸುರೇಶ್‌ಕುಮಾರ್ ಸಂಘಟನೆಗಳ ಪದಾಧಿಕಾರಿಗಳಿಗೆ ತಿಳಿ ಹೇಳಿದರು.

ವೃತ್ತಿ‌ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ನಿವೃತ್ತಿ‌ ಅಂಚಿನಲ್ಲಿರುವ ಉಪನ್ಯಾಸಕರಿಗೆ ಬಿ.ಇಡಿ ಪದವಿಯಿಂದ ವಿನಾಯಿತಿಯನ್ನು‌ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಉಪನ್ಯಾಸಕರಿಂದ ಪ್ರಾಂಶುಪಾಲರ‌ ಹುದ್ದೆಗೆ ಪದೋನ್ನತಿ ನೀಡಲು ಈಗಾಗಲೇ ತಾವು ಕಡತವನ್ನು ಅನುಮೋದಿಸಿದ್ದು ಇಷ್ಟರಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ‌ ಎಂದು ಸಚಿವರು ತಿಳಿಸಿದರು.

ADVERTISEMENT

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಕಾರ್ಯಭಾರವನ್ನು‌ ವೈಜ್ಞಾನಿಕವಾಗಿ ನಿಗದಿಗೊಳಿಸುವ ಬಗ್ಗೆ ವಿವಿಧ ತಜ್ಞರ ಸಲಹೆ ಪಡೆದು ಆದಷ್ಟು ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದರು. ಅಂತೆಯೇ, ಪದವಿಪೂರ್ವ ಕಾಲೇಜುಗಳಲ್ಲಿ ಎನ್‌ಸಿಇಆರ್‌ಟಿ ನಿಯಮಾವಳಿಗಳಂತೆ ಪ್ರತಿ ತರಗತಿಗೆ40 ವಿದ್ಯಾರ್ಥಿಗಳ ಗರಿಷ್ಟ ಸಂಖ್ಯೆಯನ್ನು ನಿಗದಿಗೊಳಿಸಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಡಿಎಸ್ಇಆರ್‌ಟಿ ಸಂಸ್ಥೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿಯೂ ಗುಣಾತ್ಮಕ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊಂದಿದ್ದು, ಮುಂದಿನ‌ ದಿನಗಳಲ್ಲಿ ಸೂಕ್ತ ಕ್ರಿಯಾಯೋಜನೆ ರೂಪಿಸಲು ಹಾಗೂಶಿಕ್ಷಣ ಸಂಸ್ಥೆಗಳಲ್ಲಿ‌ ಕೊರತೆ ಇರುವ ಪರಿಚಾರಕರ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯುವಲ್ಲಿ ಅಗತ್ಯ ಅನುಮತಿ ನೀಡಲು ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಅನುದಾನಿತ ಪದವಿಪೂರ್ವ ಕಾಲೇಜುಗಳ ವೇತನ ಪಾವತಿಯಾಗುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಸಚಿವರು ಸಕಾಲದಲ್ಲಿ‌ ವೇತನ‌ ಬಿಡುಗಡೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಚಿವರು ಕಟ್ಟುನಿಟ್ಟಿನ‌ ಸೂಚನೆಯನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.