ADVERTISEMENT

ಲಖನೌನಲ್ಲಿ ತಾಯಿ, ಸೋದರನನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತ ಬಾಲಕಿ

ಪಿಟಿಐ
Published 30 ಆಗಸ್ಟ್ 2020, 8:56 IST
Last Updated 30 ಆಗಸ್ಟ್ 2020, 8:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಲಖನೌನಲ್ಲಿ ವಾಸವಿದ್ದರೈಲ್ವೆ ಹಿರಿಯ ಅಧಿಕಾರಿಯೊಬ್ಬರ 'ಖಿನ್ನತೆಗೆ ಒಳಗಾಗಿದ್ದ' ಅಪ್ರಾಪ್ತ ಮಗಳು ತನ್ನ ತಾಯಿ ಮತ್ತು ಸಹೋದರನನ್ನು ಶನಿವಾರ ಗುಂಡಿಕ್ಕಿ ಕೊಂದಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಗೌತಂಪಳ್ಳಿ ಪ್ರದೇಶದಲ್ಲಿ ಘಟನೆ ನಡೆದಿದೆ. ಮೃತರನ್ನು ಮಾಲಿನಿ ಬಾಜಪೈ (45) ಮತ್ತು ಶರದ್ (20) ಎಂದು ಗುರುತಿಸಲಾಗಿದೆ.

ಬಾಲಕಿಯು ಖಿನ್ನತೆಯಿಂದ ಬಳಲುತ್ತಿದ್ದಳು. ಹವ್ಯಾಸಿ ಕ್ರೀಡಾಪಟುವಾಗಿದ್ದ ಆಕೆಯು ಅಪರಾಧಕ್ಕೆ ಅವಳ ಶೂಟಿಂಗ್‌ ಗನ್ ಬಳಸಿದ್ದಾಳೆ ಎಂದು ಉತ್ತರ ಪ್ರದೇಶದ ಡಿಜಿಪಿ ಎಚ್.ಸಿ. ಅವಾಸ್ಥಿ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಆಕೆಯ ಕೋಣೆಯಿಂದ ಅಸ್ಥಿಪಂಜರವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಧ್ಯಮಗಳ ವರದಿ ಕುರಿತಂತೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿ, 'ಇಲ್ಲ, ಅದು ರೇಖಾಚಿತ್ರವಾಗಿತ್ತು' ಎಂದು ತಿಳಿಸಿದ್ದಾರೆ.

ಲಖನೌ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಮಾತನಾಡಿ, ಮೃತರು ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಆರ್.ಡಿ. ಭಾಜಪೈ ಅವರ ಹೆಂಡತಿ ಮತ್ತು ಪುತ್ರ. ಗುಂಡೇಟಿನಿಂದ ಗಾಯಗೊಂಡಿದ್ದ ಪತ್ನಿ ಮತ್ತು ಮಗ ಮೃತಪಟ್ಟಿದ್ದಾರೆ. ಮಗನ ತಲೆಗೆ ಗುಂಡು ಹಾರಿಸಲಾಗಿದೆ. ತನಿಖೆಯ ವೇಳೆ ಅಪ್ರಾಪ್ತೆಯಾಗಿದ್ದ ಅವರ ಪುತ್ರಿಯೇ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಆಕೆಯು ತಾನೇ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದು, ಅಪರಾಧಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಭಾಜಪೈ ಅವರ ಪುತ್ರಿ ರೇಜರ್ ಬಳಸಿ ಗಾಯಗಳನ್ನು ಮಾಡಿಕೊಂಡಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಯ ಎರಡೂ ಕೈಗಳಿಗೂ ಗಾಯಗಳಾಗಿದ್ದವು. ಈವರೆಗೂ ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾನೆ ಒಟ್ಟಿಗೆ ತಿಂಡಿ ತಿಂದಿದ್ದ ಕುಟುಂಬಸ್ಥರು ಕೋಣೆಯಲ್ಲಿ ಮಲಗಿದ್ದರು. ಬಳಿಕ ಮಧ್ಯೆ ಎದ್ದ ಬಾಲಕಿಯು ಗನ್‌ಗೆ ಐದು ಬುಲೆಟ್‌ಗಳನ್ನು ತುಂಬಿದ್ದಾಳೆ. ಈ ಪೈಕಿ ಮೂರು ಗುಂಡುಗಳನ್ನು ಶೂಟ್ ಮಾಡಿದ್ದಾಳೆ.

ಇವುಗಳಲ್ಲಿ ಒಂದನ್ನು 'ಅನರ್ಹ ಮಾನವ' ಎಂದು ಆಕೆಯೇ ಬರೆದಿದ್ದ ಗಾಜಿನ ಮೇಲೆ ಗುಂಡು ಹಾರಿಸಿದ್ದಾಳೆ. ಬಳಿಕ ತನ್ನ ಸೋದರ ಮತ್ತು ತಾಯಿಗೆ ಗುಂಡು ಹಾರಿಸಿದ್ದಾಳೆ ಎಂದು ಪಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.