ಡಿ.ಕೆ ಶಿವಕುಮಾರ್
- ಪ್ರಜಾವಾಣಿ ಚಿತ್ರ
ನವದೆಹಲಿ: ಮುಸ್ಲಿಂ ಮೀಸಲಾತಿ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಯು, ಮತಕ್ಕಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವ ಕಾಂಗ್ರೆಸ್ ಗುಪ್ತ ಮಾರ್ಗಸೂಚಿಯನ್ನು ಬೆಳಕಿಗೆ ತಂದಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ.
ಸಂವಿಧಾನವನ್ನು ಬದಲಾಯಿಸುವುದಿಲ್ಲ ಎಂದು ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ದೇಶದ ಜನತೆಗೆ ಹೇಳಬೇಕು ಎಂದು ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಸತ್ಯವು ಪದೇ ಪದೇ ಹೊರಬೀಳುವ ಅತ್ಯಂತ ವಿಚಿತ್ರವಾದ ಅಭ್ಯಾಸವನ್ನು ಹೊಂದಿದೆ‘ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
‘ಮತಕ್ಕಾಗಿ ಸಂವಿಧಾನವನ್ನು ಬದಲಾಯಿಸುವುದು ಕಾಂಗ್ರೆಸ್ನ ಗುಪ್ತ ಮಾರ್ಗಸೂಚಿ’ ಎಂದು ಆರೋಪಿಸಿದ ಅವರು, ಶಿವಕುಮಾರ್ ಅವರ ಹೇಳಿಕೆ ಆರಂಭವಷ್ಟೇ ಎಂದರು.
‘ರಾಹುಲ್ ಗಾಂಧಿಯವರೇ ನೀವು ಮಾತನಾಡುತ್ತೀರಾ? ನಿಮ್ಮ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುವಿರೇ? ಮುಸ್ಲಿಂ ಓಲೈಕೆಗಾಗಿ ಸಂವಿಧಾನವನ್ನು ಬದಲಾಯಿಸುವುದಿಲ್ಲ ಎನ್ನುವುದನ್ನು ನೀವು ಸ್ಪಷ್ಟಪಡಿಸುವಿರೇ?’ ಎಂದು ರವಿಶಂಕರ್ ಪ್ರಶ್ನಿಸಿದರು.
ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವ ಒಳ್ಳೆಯ ದಿನಗಳು ಬರಬಹುದು ಎಂದು ಡಿ.ಕೆ ಶಿವಕುಮಾರ್ ಅವರು ಖಾಸಗಿ ವಾಹಿನಿಯ ಸಮಾವೇಶದಲ್ಲಿ ಹೇಳಿದ್ದಾರೆ ಎನ್ನಲಾದ ಮಾತುಗಳು ವಿವಾದಕ್ಕೀಡಾದ ಬೆನ್ನಲ್ಲೇ, ಬಿಜೆಪಿಯಿಂದ ಈ ಹೇಳಿಕೆ ಹೊರಬಿದ್ದಿದೆ.
ಸಂವಿಧಾನವನ್ನು ಬದಲಿಸಬೇಕು ಎಂದು ನಾನು ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಡಿ.ಕೆ ಶಿವಕುಮಾರ್ ನಂತರ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.