ಕಂಚೀಪುರಂ: ‘ಎಐಎಡಿಎಂಕೆ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದರೂ, ಅದು ಬಿಜೆಪಿಯ ಗೆಲುವಾಗಿರುತ್ತದೆ. ಆದ್ದರಿಂದ ಆ ಪಕ್ಷಕ್ಕೆ ಮತ ನೀಡಬೇಡಿ’ ಎಂದು ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಮನವಿ ಮಾಡಿದ್ದಾರೆ.
‘ಉಪಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರ ಪುತ್ರ, ಥೇಣಿ ಲೋಕಸಭಾ ಕ್ಷೇತ್ರದ ಸಂಸದ ಪಿ. ರವೀಂದ್ರನಾಥ್ ಅವರು ಬಿಜೆಪಿಯ ಸಂಸದನಂತೆಯೇ ವರ್ತಿಸುತ್ತಿದ್ದಾರೆ. ಅವರ ಉದ್ದೇಶವೇನು ಎಂಬುದು ಇದರಿಂದ ಅರ್ಥವಾಗುತ್ತದೆ. ಎಐಎಡಿಎಂಕೆಯು ಬಿಜೆಪಿಯ ಒಂದು ಶಾಖೆಯಾಗಿದೆ’ ಎಂದು ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಸ್ಟಾಲಿನ್ ಹೇಳಿದರು.
‘ನಾವು 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ನಾನು ಹಿಂದಿನಿಂದಲೂ ಹೇಳುತ್ತಿದ್ದೆ. ಆದರೆ ವಿವಿಧ ಕ್ಷೇತ್ರಗಳಿಂದ ನಮಗೆ ಬರುವ ಪ್ರತಿಕ್ರಿಯೆಯನ್ನು ನೋಡಿದರೆ, ಎಲ್ಲಾ 234 ಕ್ಷೇತ್ರಗಳಲ್ಲೂ ಡಿಎಂಕೆ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸ ಮೂಡಿದೆ. ಪ್ರತಿ ಮನೆಗೆ ಒಂದು ಹೆಲಿಕಾಪ್ಟರ್ ಅಥವಾ ವಿಮಾನ ಕೊಡಿಸುವುದಾಗಿ ಭರವಸೆ ನೀಡಿದರೂ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.