ಹೈದರಾಬಾದ್: ಕಾಚಿಗುಡ ರೈಲು ನಿಲ್ಡಾಣದಲ್ಲಿ ಎರಡು ರೈಲುಗಳು ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗಳಿಂದಾಗಿ ಆಸ್ಪತ್ರೆ ಸೇರಿದ್ದ ಸ್ಥಳೀಯ ಸ್ಥಳೀಯ ರೈಲಿನ ಚಾಲಕ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಎಂಎಂಟಿಎಸ್ ರೈಲಿನ ಚಾಲಕರಾಗಿದ್ದ 31 ವರ್ಷದ ಎಲ್.ಚಂದ್ರಶೇಖರ್ ಕ್ಯಾಬಿನ್ನಲ್ಲಿ ಸಿಲುಕಿಹಾಕಿಕೊಂಡಿದ್ದರು. ಸ್ಥಳಕ್ಕೆ ಬಂದಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸತತ 8 ಗಂಟೆಗಳ ಕಾರ್ಯಾಚರಣೆ ಬಳಿಕ ಅವರನ್ನು ಹೊರತೆಗೆದಿದ್ದರು.
ಪಕ್ಕೆಲುಬಿಗೆ ಹಾನಿ ಮತ್ತು ಬಲಗಾಲು ನಜ್ಜುಗುಜ್ಜಾಗಿದ್ದ ಚಂದ್ರಶೇಖರ್ ಅವರನ್ನು ನಾಮ್ಪಲ್ಲಿಯ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತನಾಳಗಳ ಅಪಾರ ಹಾನಿಯಿಂದಾಗಿ ವೈದ್ಯರು ಗುರುವಾರ ಮೊಣಕಾಲಿನ ಮೇಲಿನವರೆಗೆ ಅವರ ಕಾಲನ್ನು ಕತ್ತರಿಸಿ ತೆಗೆಯಬೇಕಾಯಿತು.
ಇದನ್ನೂ ಓದಿ...
ಆಸ್ಪತ್ರೆಗೆ ದಾಖಲಾದಂದಿನಿಂದಲೂ ಚಾಲಕ ವೆಂಟಿಲೇಟರ್ನಲ್ಲಿದ್ದರು. ಸೋಂಕು ಸಂಪೂರ್ಣ ದೇಹಕ್ಕೆ ಹರಡಿದ ಪರಿಣಾಮವಾಗಿ ಶನಿವಾರ ಕೊನೆಯುಸಿರೆಳೆದರು ಎಂದು ಕೇರ್ ಆಸ್ಪತ್ರೆಯ ಬುಲೆಟಿನ್ನಲ್ಲಿ ಹೇಳಲಾಗಿದೆ.
ನವೆಂಬರ್ 11ರಂದು ಲಿಂಗಂಪಲ್ಲಿ– ಫಾಲಕ್ನೂಮ ನಡುವಿನ ಎಂಎಂಟಿಎಸ್ ರೈಲು ಮತ್ತು ಕರ್ನೂಲ್– ಸಿಕಂದರಾಬಾದ್ ಎಕ್ಸ್ಪ್ರೆಸ್ ನಡುವಿನ ಹಂಡ್ರಿ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದವು. ಡಿಕ್ಕಿಯ ರಭಸಕ್ಕೆ ಲೋಕೊ ಪೈಲಟ್ ಸಹಿತ 16 ಮಂದಿ ಗಾಯಗೊಂಡಿದ್ದರು. ಉಪನಗರ ರೈಲಿನ ಲೋಕೊ ಪೈಲಟ್ ಇದ್ದ ‘ಕ್ಯಾಬಿನ್’ ನಜ್ಜುಗುಜ್ಜಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.