ಏಕನಾಥ ಶಿಂದೆ ಮತ್ತು ಕುನಾಲ್ ಕಾಮ್ರಾ
ಮುಂಬೈ: ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿದ ವಿಡಂಬನೆಯ ವಿಡಿಯೊ ಒಂದರಲ್ಲಿ ‘ವಂಚಕ’ ಎಂದು ಕರೆದಿದ್ದು ವಿವಾದ ಸೃಷ್ಟಿಸಿ ವಾರ ಕಳೆದರೂ, ಕಾಮ್ರಾ ಅವರು ಮುಂಬೈ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿಲ್ಲ.
ಕಾಮ್ರಾ ಅವರಿಗೆ ಇಂದು (ಶನಿವಾರ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮೂರನೇ ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಗೈರಾಗಿದ್ದಾರೆ. ಆದ ಕಾರಣ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಕಾಮ್ರಾ ಅವರು ಈಗ ತಮಿಳುನಾಡಿನ ವಿಲ್ಲುಪುರಂ ಪಟ್ಟಣದಲ್ಲಿ ಇದ್ದಾರೆ. ಅವರು ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಕಾಮ್ರಾ ಅವರಿಗೆ ಮದ್ರಾಸ್ ಹೈಕೋರ್ಟ್ ಏಪ್ರಿಲ್ 7ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಾಮ್ರಾ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳಿಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಮುಂಬೈ ಪೊಲೀಸರ ತಂಡವೊಂದು ಕಾಮ್ರಾ ಅವರಿಗೆ ಸೇರಿದ ದಾದರ್ನ ಮನೆಗೆ ಭೇಟಿ ನೀಡಿತ್ತು.
ಈ ನಡುವೆ ಸಾಮಾಜಿಕ ಮಾಧ್ಯಮ ‘ಎಕ್ಸ್’ ಮೂಲಕ ಪೋಸ್ಟ್ ಒಂದನ್ನು ಬರೆದಿರುವ ಕಾಮ್ರಾ, ‘ನಾನು 10 ವರ್ಷಗಳಿಂದ ವಾಸವಿರದ ವಿಳಾಸಕ್ಕೆ ಹೋಗುವುದರಿಂದ ನಿಮ್ಮ ಸಮಯ ಮತ್ತು ಸಾರ್ವಜನಿಕ ಸಂಪನ್ಮೂಲ ಪೋಲಾಗುತ್ತದೆ’ ಎಂದು ಹೇಳಿದ್ದರು.
ಯುವಸೇನಾ ನಾಯಕ ರಾಹುಲ್ ಕನಲ್ ಅವರು ಕಾಮ್ರಾ ಅವರನ್ನು ಉದ್ದೇಶಿಸಿ ಮತ್ತೆ ಪರೋಕ್ಷವಾಗಿ ಬೆದರಿಕೆಯ ಮಾತು ಆಡಿದ್ದಾರೆ. ‘ಅವರಿಗೆ ಸಮಾಧಾನ ತಂದಿರುವ ಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಏಪ್ರಿಲ್ 7ರವರೆಗೆ ಮಾತ್ರ ಅನ್ವಯವಾಗುತ್ತದೆ. ಅವರು ಕಾನೂನು ಪ್ರಕ್ರಿಯೆ ಎದುರಿಸಬೇಕು... ಅಲ್ಲಿ (ತಮಿಳುನಾಡು) ಅವರಿಗೆ ಯಾವುದೇ ಬಗೆಯಲ್ಲಿ ರಕ್ಷಣೆ ಇರಲಿ, ಅವರು ಮುಂಬೈಗೆ ಬಂದಾಗ ಅವರನ್ನು ಶಿವಸೇನಾ ಶೈಲಿಯಲ್ಲಿ ಸ್ವಾಗತಿಸಲಾಗುತ್ತದೆ’ ಎಂದು ಕನಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.