ADVERTISEMENT

ಚುನಾವಣಾ ಬಾಂಡ್: ವಿವರ ಬಹಿರಂಗಕ್ಕೆ ಸಮಯ ಕೋರಿದ SBI ಅರ್ಜಿ ವಿಚಾರಣೆ ಮಾ. 11ಕ್ಕೆ

ಪಿಟಿಐ
Published 8 ಮಾರ್ಚ್ 2024, 13:17 IST
Last Updated 8 ಮಾರ್ಚ್ 2024, 13:17 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸುವುದಕ್ಕೆ ಜೂನ್ 30ರವರೆಗೂ ಸಮಯ ನೀಡಬೇಕು ಎಂಬ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಅರ್ಜಿಯ ವಿಚಾರಣೆಯನ್ನು ಮಾರ್ಚ್ 11ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಹೇಳಿದೆ.

ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಫೆ. 15ರಂದು ಘೋಷಿಸಿದ್ದ ಸುಪ್ರೀಂ ಕೋರ್ಟ್, ಬಾಂಡ್‌ನ ಸಮಗ್ರ ವಿವರಗಳನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಜತೆಗೆ ಆಯೋಗದ ಅಂತರ್ಜಾಲತಾಣದಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿತ್ತು. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ವಿವರಗಳನ್ನು ಕ್ರೋಢೀಕರಿಸುವುದು ಅಸಾಧ್ಯವಾಗಿದ್ದು, ಜೂನ್ 30ರವರೆಗೆ ಕಾಲಾವಕಾಶ ನೀಡಬೇಕು ಎಂದು ಬ್ಯಾಂಕ್ ಕೋರಿತ್ತು.

ADVERTISEMENT

ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ಮೂಲಕ ಮಾರಾಟ ಮಾಡಲಾಗಿತ್ತು. ಬ್ಯಾಂಕ್, ಈಗ ಕೆಲವೊಂದು ವ್ಯಾವಹಾರಿಕವಾದ ಸಮಸ್ಯೆಗಳನ್ನು ಉಲ್ಲೇಖಿಸಿದೆ. ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ್ದ ಮೂರು ವಾರಗಳ ಗಡುವಿನಲ್ಲಿ ಇವುಗಳನ್ನು ಸಲ್ಲಿಸುವುದು ಕಷ್ಟಕರ ಎಂದು ಬ್ಯಾಂಕ್ ಹೇಳಿತ್ತು.

‘2019ರ ಏ. 12ರಿಂದ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಕಟವಾದ ದಿನದವರೆಗೂ ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಬಳಸಿ ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ’ ಎಂದು ಉಲ್ಲೇಖಿಸಿದೆ.

ನಗದೀಕರಣಗೊಂಡ ಬಾಂಡ್‌ಗಳನ್ನು ಮುದ್ರೆ ಹಾಕಿದ ಲಕೋಟೆಗಳಲ್ಲಿ ಮುಂಬೈನ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಇಡಲಾಗಿದೆ. ಅಯೋಗಕ್ಕೆ ಸಲ್ಲಿಸಬೇಕಾದ ವಿವರಗಳಂತೆ 44,434 ಮಾಹಿತಿಗಳನ್ನು ಪ್ರತ್ಯೇಕಗೊಳಿಸಿ, ಹೋಲಿಕೆ ಮಾಡಿ, ಕ್ರೋಢೀಕರಿಸಬೇಕಿದೆ ಎಂದು ಹೇಳಿದೆ.

ದಾನಿಗಳ ವಿವರಗಳನ್ನು ಗೋಪ್ಯವಾಗಿಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೇ ಕಾರಣದಿಂದ ಬಾಂಡ್‌ಗಳ ವಿವರಗಳು ಹಾಗೂ ದಾನಿಗಳ ಹೆಸರನ್ನು ಪರಸ್ಪರ ಹೋಲಿಸಿ ವಿವರ ಸಂಗ್ರಹಿಸಬೇಕಾಗಿದೆ. ಈ ಎಲ್ಲವೂ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ.

‘ದಾನಿಗಳ ವಿವರ ಸಂಗ್ರಹಿಸಲು ಪ್ರತಿ ಬಾಂಡ್‌ ವಿತರಿಸಿದ ದಿನಾಂಕದ ಮಾಹಿತಿ ಪರಿಶೀಲಿಸಬೇಕು. ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ತಮ್ಮ ಖಾತೆಗಳಿರುವ ಬ್ಯಾಂಕ್‌ಗಳಲ್ಲಿ ನಗದೀಕರಣಗೊಳಿಸಿಕೊಂಡಿವೆ. ಅದೇ ಪ್ರಕಾರ, ಎರಡನ್ನೂ ಗುರುತಿಸಿ ಹೋಲಿಕೆ ಮಾಡಬೇಕಾಗಿದೆ. ಬಾಂಡ್‌ಗಳ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಗಳು ಡಿಜಿಟಲ್‌ ಸ್ವರೂಪದಲ್ಲಿವೆ. ಖರೀದಿದಾರರ ಹೆಸರು, ಕೆವೈಸಿ ವಿವರಗಳು ಭೌತಿಕ ಸ್ವರೂಪದಲ್ಲಿಯೂ ಇವೆ. ಎಲ್ಲ ಮಾಹಿತಿಗಳನ್ನು ಡಿಜಿಟಲ್‌ ಸ್ವರೂಪದಲ್ಲಿಯೇ ಇಡದಿರುವುದರ ಉದ್ದೇಶ, ಯೋಜನೆಯ ಗುರಿಯಂತೆ ಮಾಹಿತಿಗಳು ಸುಲಭವಾಗಿ ಸಿಗದಂತಿರಬೇಕು ಎಂಬುದೇ ಆಗಿದೆ’ ಎಂದು ಬ್ಯಾಂಕ್ ವಿವರಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಫೆ. 15ರಂದು ನೀಡಿದ ತೀರ್ಪಿನಲ್ಲಿ, ಕೇಂದ್ರದ ಚುನಾವಣಾ ಬಾಂಡ್‌ ಯೋಜನೆ ಅಸಾಂವಿಧಾನಿಕ ಎಂದಿದ್ದು, ದಾನಿಗಳ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.