ನವದಹೆಲಿ: ಫೆಬ್ರವರಿ 6 ಶನಿವಾರದಂದು (ಇಂದು) ನಡೆಯಲಿರುವ ದೇಶವ್ಯಾಪ್ತಿ ಚಕ್ಕಾ ಜಾಮ್ (ರಸ್ತೆ ದಿಗ್ಬಂಧನ) ಪ್ರತಿಭಟನೆಯಿಂದ ರಾಷ್ಟ್ರ ರಾಜಧಾನಿ ನವದೆಹಲಿ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳನ್ನು ಹೊರತುಪಡಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ದೆಹಲಿ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಚಕ್ಕಾ ಜಾಮ್ ಇರುವುದಿಲ್ಲ. ಆದರೆ ದೇಶದೆಲ್ಲೆಡೆ ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಈ ರಾಜ್ಯಗಳಲ್ಲಿ ಹಿಂಸಾಚಾರವನ್ನು ಹರಡಲು ಕೆಲವು ಪ್ರಯತ್ನಿಸಿದ್ದಾರೆ ಎಂಬುದನ್ನು ನಾವು ಮನಗಂಡಿದ್ದು, ಈ ಸಂಬಂಧ ಪುರಾವೆಗಳಿವೆ. ಆದ್ದರಿಂದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ರಸ್ತೆಗಳನ್ನು ತಡೆಯದಿರಲು ನಿರ್ಧರಿಸಿದ್ದೇವೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಮಾಹಿತಿ ನೀಡಿದರು.
ದೆಹಲಿಯಲ್ಲಿ ಈಗಾಗಲೇ ಪ್ರತಿಭಟನೆ ನಡೆಯುತ್ತಿರುವುದರಿಂದ ಚಕ್ಕಾ ಜಾಮ್ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಪ್ರತಿಭಟನೆ ನಡೆಸುತ್ತಿರುವ ರಸ್ತೆಗಳನ್ನು ಹೊರತುಪಡಿಸಿ ದೆಹಲಿಯ ಇತರೆಲ್ಲ ರಸ್ತೆಗಳು ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.
ಅದೇ ಹೊತ್ತಿಗೆ ಚಕ್ಕಾ ಜಾಮ್ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ಆಹ್ವಾನ ನೀಡಲಾಗಿದೆ. ಮಧ್ಯಾಹ್ನ 12ರಿಂದ 3 ಗಂಟೆಯ ವರೆಗೆ ದೇಶೆದೆಲ್ಲೆಡೆ ರಸ್ತೆಗೆ ದಿಗ್ಬಂಧನ ಹೇರಲಿದ್ದಾರೆ.
ದೆಹಲಿಯ ಗಡಿಯಲ್ಲಿ ಠಿಕಾಣಿ ಹೂಡಿರುವ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು, ಕಳೆದ 70ಕ್ಕೂ ಹೆಚ್ಚು ದಿನಗಳಿಂದಲೂ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ದೇಶದೆಲ್ಲೆಡೆ ವ್ಯಾಪಿಸಲಾಗಿದೆ.
ಚಕ್ಕಾ ಜಾಮ್ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್, ಅರೆಸೇನಾ ಪಡೆ, ಮೀಸಲು ಪೊಲೀಸ್ ಪಡೆ ಸೇರಿದಂತೆ 50,000 ಭದ್ರತಾ ಸಿಬ್ಬಂದಿಗಳನ್ನು ದೆಹಲಿ ಎನ್ಸಿಆರ್ನಲ್ಲಿ ನಿಯೋಜಿಸಲಾಗಿದೆ. ಗಣರಾಜ್ಯೋತ್ಸವ ದಿನದಂದು ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಪೆರೇಡ್ನಲ್ಲಿ ವ್ಯಾಪಕ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಚಕ್ಕಾ ಜಾಮ್ ಪ್ರತಿಭಟನೆಗೆ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.