ನವದೆಹಲಿ: ‘ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ‘ಅನ್ನದಾತರ’ ಸಂಕಷ್ಟವನ್ನೂ ಗಮನಿಸದ, ದಾರ್ಷ್ಟ್ಯ ಮನೋಭಾವದ ಸರ್ಕಾರ ಅಧಿಕಾರದಲ್ಲಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬೇಷರತ್ ಆಗಿ ಕೃಷಿ ಕಾಯ್ದೆಗಳನ್ನು ವಾಪಸು ಪಡೆಯಬೇಕು ಎಂದೂ ಆಗ್ರಹಿಸಿದ್ದಾರೆ. ಈ ಕುರಿತ ಹೇಳಿಕೆಯಲ್ಲಿ, ‘ಜನರ ಭಾವನೆಗಳನ್ನು ಗೌರವಿಸದ ಸರ್ಕಾರ ಮತ್ತು ಅದರ ನಾಯಕರು ದೀರ್ಘ ಕಾಲ ಅಧಿಕಾರದಲ್ಲಿ ಉಳಿಯಲಾಗದು’ ಎಂದಿದ್ದಾರೆ.
‘ಪ್ರತಿಭಟನಾನಿರತ ರೈತರು ಯಾವುದೇ ಕಾರಣಕ್ಕೂ ಸರ್ಕಾರದ ನೀತಿಗಳ ಎದುರು ಮಂಡಿಯೂರಲಾರರು ಎಂಬುದು ಈಗ ಸ್ಪಷ್ಟವಾಗಿದೆ.ರೈತರು ಈಗ ಚಳಿ ಮತ್ತು ಮಳೆಯಲ್ಲಿ ಸಿಕ್ಕಿ ಸಾಯುತ್ತಿದ್ದಾರೆ. ಇನ್ನೂ ಸಮಯವಿದೆ. ಮೋದಿ ಸರ್ಕಾರ ದಾಷ್ಟ್ಯವನ್ನು ಬದಿಗಿಟ್ಟು, ಕೂಡಲೇ ಬೇಷರತ್ ಆಗಿ ನೂತನ ಕೃಷಿ ಕಾಯ್ದೆಗಳನ್ನು ಹಿಂದೆಪಡೆಯಬೇಕು’ ಎಂದಿದ್ದಾರೆ.
ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವುದೇ ನಿಜವಾದ ರಾಜಧರ್ಮ. ಹಾಗೂ ಮೃತಪಟ್ಟಿರುವ ರೈತರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ಸೋನಿಯಾಗಾಂಧಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.