ADVERTISEMENT

ಏಪ್ರಿಲ್‌ 3ರ ವರೆಗೂ ಎನ್‌ಐಎ ವಶದಲ್ಲಿ ಸಚಿನ್‌ ವಾಜೆ: ವಿಶೇಷ ಕೋರ್ಟ್‌

ಮುಂಬೈ

ಏಜೆನ್ಸೀಸ್
Published 25 ಮಾರ್ಚ್ 2021, 12:25 IST
Last Updated 25 ಮಾರ್ಚ್ 2021, 12:25 IST
ಅಮಾನತಿನಲ್ಲಿರುವ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ
ಅಮಾನತಿನಲ್ಲಿರುವ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ   

ಮುಂಬೈ: ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್‌ಐಎ) ಮುಂಬೈ ಪೊಲೀಸ್‌ ಇಲಾಖೆಯ ಮಾಜಿ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌ ಸಚಿನ್ ವಾಜೆ ವಿಚಾರಣೆ ಅವಧಿಯನ್ನು ಏಪ್ರಿಲ್‌ 3ರ ವರೆಗೂ ವಿಸ್ತರಿಸಲಾಗಿದೆ. ಈ ಕುರಿತು ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಉದ್ಯಮಿ ಮುಕೇಶ್ ಅಂಬಾನಿಯವರ ದಕ್ಷಿಣ ಮುಂಬೈ ನಿವಾಸದ ಸಮೀಪದಲ್ಲಿ ಸ್ಫೋಟಕ ತುಂಬಿದ ವಾಹನ ಪತ್ತೆ ಪ್ರಕರಣದಲ್ಲಿ ಸಚಿನ್ ವಾಜೆ ಅವರನ್ನು ಬಂಧಿಸಿ, ಎನ್‌ಐಎ ವಿಚಾರಣೆ ನಡೆಸುತ್ತಿದೆ. ಸ್ಫೋಟಕಗಳಿದ್ದ ವಾಹನದ ಮಾಲೀಕ ಮನ್‍ಸುಖ್‍ ಹಿರೇನ್‍ ಶಂಕಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಮುಂದುವರಿಸಿದೆ.

ಹಿರೇನ್‍ ಶಂಕಾಸ್ಪದ ಸಾವಿನಲ್ಲಿ ಸಚಿನ್‌ ವಾಜೆ ಕೈವಾಡವಿದೆ ಎಂದು ಹಿರೇನ್‌ ಅವರ ಪತ್ನಿ ಆರೋಪಿಸಿದ್ದರು. ಆರೋಪದ ಬೆನ್ನಲ್ಲೇ ಮುಂಬೈ ಕ್ರೈಂ ಬ್ರ್ಯಾಂಚ್‌ ಕರ್ತವ್ಯದಿಂದ ವಾಜೆ ಅವರನ್ನು ಹೊರಗುಳಿಸಲಾಗಿತ್ತು ಹಾಗೂ ಅಮಾನತುಗೊಳಿಸಲಾಗಿದೆ.

ADVERTISEMENT

'ಇಡೀ ಘಟನೆಯಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ನಡೆದಿರುವ ಅಪರಾಧಕ್ಕೂ ನನಗೂ ಸಂಬಂಧವಿಲ್ಲ. ನಾನು ಒಂದೂವರೆ ದಿನದ ವರೆಗೂ ಪ್ರಕರಣದ ತನಿಖಾಧಿಕಾರಿಯಾಗಿದ್ದೆ, ತನಿಖೆಗೆ ಏನು ಅಗತ್ಯವಾಗಿತ್ತೊ ಅದನ್ನು ನಿರ್ವಹಿಸಿದೆ. ನಾನಷ್ಟೇ ಅಲ್ಲ, ಕ್ರೈಂ ಬ್ರ್ಯಾಂಚ್‌ನ ಎಲ್ಲ ಅಧಿಕಾರಿಗಳು ಹಾಗೂ ಮುಂಬೈ ಪೊಲೀಸರು ತನಿಖೆ ನಡೆಸಿದ್ದಾರೆ' ಎಂದು ವಾಜೆ ಕೋರ್ಟ್‌ ಮುಂದೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.