ADVERTISEMENT

ಒಡಿಶಾ: 11 ದಿನಗಳಲ್ಲಿ 4 ಹೆಣ್ಣು ಆನೆಗಳು ಸಾವು

ಪಿಟಿಐ
Published 13 ಫೆಬ್ರುವರಿ 2021, 6:12 IST
Last Updated 13 ಫೆಬ್ರುವರಿ 2021, 6:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭವಾನಿಪಟ್ನಾ: ಒಡಿಶಾದ ಕಲಹಂಡಿ ಜಿಲ್ಲೆಯ ಕಾರ್ಲಾಪತ್‌ ವನ್ಯಜೀವಿ ಧಾಮದಲ್ಲಿ ಕಳೆದ 11 ದಿನಗಳಲ್ಲಿ ಒಟ್ಟು ನಾಲ್ಕು ಹೆಣ್ಣು ಆನೆಗಳು ಮೃತಪಟ್ಟಿವೆ.

‘ವನ್ಯಧಾಮದ ಘುಸುರಿಗುಡಿ ನುಲ್ಹಾ ಭಾಗದಲ್ಲಿರುವ ಜಲಮೂಲದ ಬಳಿ ಗುರುವಾರ ಹೆಣ್ಣು ಆನೆಯ ಶವ ಪತ್ತೆಯಾಗಿದೆ. ಇದೇ ಪ್ರದೇಶದಲ್ಲಿ ಫೆಬ್ರುವರಿ 9 ಮತ್ತು 10 ರಂದು ತಲಾ ಒಂದು ಹೆಣ್ಣು ಆನೆಯ ಮೃತದೇಹಗಳು ಸಿಕ್ಕಿದ್ದವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಫೆಬ್ರುವರಿ 1 ರಂದು ವನ್ಯಧಾಮದ ತೆಂಟುಲಿಪಾದ ಗ್ರಾಮದ ಬಳಿ ಮೊದಲ ಹೆಣ್ಣು ಆನೆಯ ಶವ ಪತ್ತೆಯಾಗಿತ್ತು’ ಎಂದು ಅಧಿಕಾರಿಗಳು ಹೇಳಿದರು.

ADVERTISEMENT

‘ಬ್ಯಾಕ್ಟೀರಿಯಾದ ಸೋಂಕಿನಿಂದಾಗಿ ಆನೆಗಳು ಮೃತಪಟ್ಟಿವೆ. ವನ್ಯಧಾಮದಲ್ಲಿರುವ ಜಲಮೂಲಗಳಿಗೂ ಬಹುಶಃ ಸೋಂಕು ತಗುಲಿರುವ ಸಾಧ್ಯತೆಗಳಿವೆ’ ಎಂದು ಅರಣ್ಯದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಶಶಿಪಾಲ್‌ ಅವರು ಮಾಹಿತಿ ನೀಡಿದರು.

‘ವನ್ಯಧಾಮದ ಜಲಮೂಲಗಳು ಕಲುಷಿತಗೊಂಡಿರುವ ಸಾಧ್ಯತೆಗಳಿವೆ. ಹಾಗಾಗಿ ಸ್ಥಳೀಯರು ತಮ್ಮ ಜಾನುವಾರುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಬಾರದು’ ಎಂದು ವಿಭಾಗೀಯ ಅರಣ್ಯ ಅಧಿಕಾರಿ ಅಶೋಕ್ ಕುಮಾರ್‌ ಅವರು ಸೂಚನೆ ನೀಡಿದ್ದಾರೆ.

‘ಅರಣ್ಯದ ಜಲಮೂಲಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲಾಗಿದೆ. ವಿವಿಧ ಸ್ಥಳಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.