ADVERTISEMENT

ಅಕಾಲಿಕ ಮಳೆಗೆ ಬೆಳೆ ನಷ್ಟ; ಪರಿಹಾರ ನೀಡುವಂತೆ ಪಂಜಾಬ್ ಸಿಎಂಗೆ ಕೇಜ್ರಿವಾಲ್ ಮನವಿ

ಪಿಟಿಐ
Published 26 ಅಕ್ಟೋಬರ್ 2021, 9:54 IST
Last Updated 26 ಅಕ್ಟೋಬರ್ 2021, 9:54 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ನವದೆಹಲಿ: ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿಸಿರುವ ಗಡಿ ರಾಜ್ಯದ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಒತ್ತಾಯಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟ ಅನುಭವಿಸಿದ ರಾಜಧಾನಿಯ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಕಳೆದ ವಾರವಷ್ಟೇ ಘೋಷಿಸಿತ್ತು.

'ಅಕಾಲಿಕ ಮಳೆಯಿಂದಾಗಿ ಪಂಜಾಬ್‌ನ ಹಲವು ಪ್ರದೇಶಗಳಲ್ಲಿ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ನಷ್ಟ ಅನುಭವಿಸಿದ ದೆಹಲಿ ರೈತರಿಗೆ ನಾವು ಪ್ರತಿ ಹೆಕ್ಟೇರ್‌ಗೆ ರೂ 50,000 ಪರಿಹಾರವನ್ನು ಈಗಾಗಲೇ ಘೋಷಿಸಿದ್ದೇವೆ. ಹೀಗಾಗಿ ಅವರ ರಾಜ್ಯದ ರೈತರಿಗೆ ಸೂಕ್ತ ಮತ್ತು ತಕ್ಷಣ ಪರಿಹಾರವನ್ನು ನೀಡುವಂತೆ ನಾನು ಪಂಜಾಬ್ ಸಿಎಂ ಚನ್ನಿ ಅವರಿಗೆ ಮನವಿ ಮಾಡುತ್ತೇನೆ' ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ADVERTISEMENT

ದೆಹಲಿಯ ಎಲ್ಲಾ ಎಸ್‌ಡಿಎಂಗಳು ಮತ್ತು ಡಿಎಂಗಳು ಬೆಳೆ ಹಾನಿಯಾದ ಸ್ಥಳಗಳ ಸಮೀಕ್ಷೆ ನಡೆಸುತ್ತಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ನಾವು ಒಂದೂವರೆ ತಿಂಗಳೊಳಗೆ ಪರಿಹಾರವನ್ನು ವಿತರಿಸಬಹುದು' ಎಂದು ಕಳೆದ ವಾರವಷ್ಟೇ ದೆಹಲಿ ಮುಖ್ಯಮಂತ್ರಿ ಹೇಳಿದ್ದರು.

ಅಕಾಲಿಕ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯು ಕಳೆದ ವಾರ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಪ್ರಮುಖ ಬೆಳೆಗಳಾದ ಭತ್ತ, ಕಬ್ಬು, ಆಲೂಗಡ್ಡೆ ಮತ್ತು ಬಟಾಣಿ ಬೆಳೆಗಳನ್ನು ಹಾನಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.