
ವಶಕ್ಕೆ ಪಡೆದ ಚಿನ್ನದ ಗಟ್ಟಿಗಳನ್ನು ‘ಎಕ್ಸ್’ನಲ್ಲಿ ಪ್ರದರ್ಶಿಸಿದ ಇ.ಡಿ
ನವದೆಹಲಿ: ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಬಂಧನದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಗುರುವಾರ ಹೊಸದಾಗಿ ದಾಳಿ ನಡೆಸಿ ₹50.33 ಕೋಟಿ ಮೌಲ್ಯದ 40 ಕೆ.ಜಿ ಬಂಗಾರವನ್ನು ವಶಕ್ಕೆ ಪಡೆದಿದೆ.
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಚಳ್ಳಕೆರೆಯ ಎರಡು ಲಾಕರ್ಗಳಲ್ಲಿಡಲಾಗಿದ್ದ 24 ಕ್ಯಾರಟ್ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಚಿನ್ನದ ಮಾಲೀಕರು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ವೀರೇಂದ್ರ ಅವರನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಇ.ಡಿ. ಬಂಧಿಸಿತ್ತು. ಕ್ಯಾಸಿನೊ ಅನ್ನು ಗುತ್ತಿಗೆ ಪಡೆಯಲು ಸಿಕ್ಕಿಂಗೆ ತೆರಳಿದ್ದ ವೇಳೆ ಅಲ್ಲಿಯೇ ಬಂಧಿಸಿ, ಕರೆತರಲಾಗಿತ್ತು. ವೀರೇಂದ್ರ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ವೀರೇಂದ್ರ ಅವರೇ ಪ್ರಮುಖ ಆರೋಪಿ ಎಂದು ಇ.ಡಿ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯವು ₹103 ಕೋಟಿ ಮೌಲ್ಯದ 21 ಕೆ.ಜಿ ಬಂಗಾರ, ಚಿನ್ನದ ಗಟ್ಟಿಗಳು, ಚಿನ್ನ, ಬೆಳ್ಳಿ ಆಭರಣಗಳು, ಬ್ಯಾಂಕ್ ಖಾತೆಯಲ್ಲಿದ್ದ ನಗದು ಹಾಗೂ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿತ್ತು.
‘ಅಕ್ರಮ ಆನ್ಲೈನ್ ಬೆಟ್ಟಿಂಗ್ ವೆಬ್ಸೈಟ್ಗಳಾದ ‘ಕಿಂಗ್ 567’ ಹಾಗೂ ‘ರಾಜಾ567’ ಕಾರ್ಯಾಚರಣೆಯಲ್ಲಿ ವೀರೇಂದ್ರ ಹಾಗೂ ಅವರ ಸ್ನೇಹಿತರು, ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಈ ವೆಬ್ಸೈಟ್ ಮೂಲಕ ದೇಶದಾದ್ಯಂತ ಸಾವಿರಾರು ಮಂದಿ ಅಮಾಯಕರಿಗೆ ಮೋಸಮಾಡಿದ್ದರು. ವೀರೇಂದ್ರ ಅವರು ನಿಯಂತ್ರಿಸುತ್ತಿದ್ದ ಬೆಟ್ಟಿಂಗ್ ವೆಬ್ಸೈಟ್ಗಳ ವಹಿವಾಟು ₹2ಸಾವಿರ ಕೋಟಿಗಿಂತಲೂ ಹೆಚ್ಚಿದೆ’ ಎಂದು ಇ.ಡಿ ತಿಳಿಸಿತ್ತು.
ಕೆ.ಸಿ.ವೀರೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.