ADVERTISEMENT

GST Reforms: ಜಾರಿಗೆ ಸಹಕರಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಮನವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 10:21 IST
Last Updated 17 ಆಗಸ್ಟ್ 2025, 10:21 IST
   

ನವದೆಹಲಿ: ಮುಂದಿನ ಪೀಳಿಗೆಯ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸುಧಾರಣೆಗಳ ಕರಡನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ವಿತರಿಸಿದೆ. ದೀಪಾವಳಿಗೆ ಮುಂಚಿತವಾಗಿ ಪ್ರಸ್ತಾವನೆಯನ್ನು ಜಾರಿಗೆ ತರಲು ಅವರ ಸಹಕಾರವನ್ನು ಕೋರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಜಿಎಸ್‌ಟಿಯಲ್ಲಿನ ಸುಧಾರಣೆಯಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಹಾಗೂ ಸಣ್ಣ ಮತ್ತು ದೊಡ್ಡ ವ್ಯವಹಾರಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎರಡು ಎಕ್ಸ್‌ಪ್ರೆಸ್‌ವೇಗಳ ಉದ್ಘಾಟನೆಯ ನಂತರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಕೇಂದ್ರವು ಜಿಎಸ್‌ಟಿ ಕಾನೂನನ್ನು ಸರಳಗೊಳಿಸಲು ಮತ್ತು ತೆರಿಗೆ ದರಗಳನ್ನು ಪರಿಷ್ಕರಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.

ADVERTISEMENT

ಆಗಸ್ಟ್ 15 ರಂದು ಕೆಂಪು ಕೋಟೆಯ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಜಿಎಸ್‌ಟಿ ಕಾನೂನನ್ನು ಸುಧಾರಿಸುವ ಪ್ರಸ್ತಾಪವನ್ನು ಘೋಷಿಸಿದ್ದರು.

‘ನಮಗೆ, ಸುಧಾರಣೆ ಎಂದರೆ ಉತ್ತಮ ಆಡಳಿತದ ವಿಸ್ತರಣೆ. ಆದ್ದರಿಂದ, ಸರ್ಕಾರವು ನಿರಂತರವಾಗಿ ಸುಧಾರಣೆಗಳನ್ನು ತರುವತ್ತ ಗಮನಹರಿಸುತ್ತಿದೆ’ಎಂದು ಮೋದಿ ಹೇಳಿದ್ದಾರೆ.

‘ಮುಂಬರುವ ತಿಂಗಳುಗಳಲ್ಲಿ ಜನರ ಜೀವನ ಮತ್ತು ವ್ಯವಹಾರಗಳನ್ನು ಸರಳವಾಗುವಂತೆ ಮಾಡಲು ನಾವು ಅನೇಕ ದೊಡ್ಡ ಸುಧಾರಣೆಗಳನ್ನು ಮಾಡಲಿದ್ದೇವೆ’ಎಂದು ಪ್ರಧಾನಿ ತಿಳಿಸಿದ್ದಾರೆ.

ಕೇಂದ್ರವು ಜಿಎಸ್‌ಟಿಯಲ್ಲಿ ‘ಮುಂದಿನ ಪೀಳಿಗೆಯ ಸುಧಾರಣೆ’ಯನ್ನು ತರುತ್ತಿದೆ, ಈ ದೀಪಾವಳಿಯಲ್ಲಿ, ಜನರು ಜಿಎಸ್‌ಟಿ ಸುಧಾರಣೆಯಿಂದ ಎರಡು ಪಟ್ಟು ಬೋನಸ್ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪ್ರಸ್ತಾವಿತ ಈ ಸುಧಾರಣೆಗೆ ಎಲ್ಲ ರಾಜ್ಯಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ದೀಪಾವಳಿ ಹಬ್ಬವು ಮತ್ತಷ್ಟು ಸಂಭ್ರಮದಿಂದ ಕೂಡಿರುವಂತೆ ಮಾಡಲು ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಈ ಸುಧಾರಣೆಯ ಉದ್ದೇಶ ಜಿಎಸ್‌ಟಿಯನ್ನು ಸರಳಗೊಳಿಸುವುದು ಮತ್ತು ದರಗಳನ್ನು ಪರಿಷ್ಕರಿಸುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.