ದಾಹೋದ್, ಗುಜರಾತ್: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಅವ್ಯವಹಾರ ನಡೆಸಿದ್ದ ಆರೋಪದಡಿ ಬಂಧಿತರಾಗಿದ್ದ ಗುಜರಾತ್ ಸಚಿವ ಬಚ್ಚುಭಾಯಿ ಖಾಬಡ್ ಅವರ ಮಗನಿಗೆ ಜಾಮೀನು ಸಿಕ್ಕ ಎರಡು ದಿನದ ಬಳಿಕ ಮತ್ತೊಂದು ಪ್ರಕರಣದಲ್ಲಿ ಬಂಧಿಸಲಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ದಾಖಲಾಗಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ, ಗುಜರಾತ್ನ ಪಂಚಾಯತ್ ಹಾಗೂ ಕೃಷಿ ರಾಜ್ಯ ಸಚಿವ ಬಚ್ಚುಭಾಯಿ ಮಕ್ಕಳಾದ ಬಲವಂತ್ ಹಾಗೂ ಅವರ ಸಹೋದರ ಕಿರಣ್ ಅವರನ್ನು ಬಂಧಿಸಲಾಗಿತ್ತು. ಮೇ 29ರಂದು ಇಬ್ಬರಿಗೂ ನ್ಯಾಯಾಲಯವು ಜಾಮೀನು ನೀಡಿತ್ತು.
‘ಮತ್ತೊಂದು ಪ್ರಕರಣದಲ್ಲಿ ಕಿರಣ್ ಅವರನ್ನು ಅದೇ ದಿನ ಬಂಧಿಸಲಾಗಿತ್ತು. ದಾಹೋದ್ ‘ಬಿ’ ವಲಯದ ಪೊಲೀಸರು ಹೊಸತಾಗಿ ದಾಖಲಿಸಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ, ಬಲವಂತ್ ಅವರನ್ನು ಭಾನುವಾರ ಬಂಧಿಸಲಾಯಿತು’ ಎಂದು ದಾಹೋದ್ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿಂಗ್ ಭಂಡಾರಿ ತಿಳಿಸಿದರು.
2022–23ರಲ್ಲಿ ದಾಹೋದ್ನ ಧನ್ಪುರ ತಾಲ್ಲೂಕಿನ ಭಾನ್ಪುರ ಗ್ರಾಮದಲ್ಲಿ ನರೇಗಾದ ಅಡಿಯಲ್ಲಿ ಕೆಲಸ ಪೂರ್ಣಗೊಳಿಸದೇ, ಬಲವಂತ್ ಅವರ ‘ಶ್ರೀರಾಜ್ ಕನ್ಸ್ಟ್ರಕ್ಷನ್ ಸಂಸ್ಥೆ ₹33.86 ಲಕ್ಷ ಹಣ ಪಡೆದಿದೆ ಎಂದು ಮೇ 31ರಂದು ದಾಖಲಾದ ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಇದರ ಆಧಾರದಲ್ಲಿ ಬಲವಂತ್ ಅವರನ್ನು ಬಂಧಿಸಲಾಗಿದೆ.
ನರೇಗಾದಡಿಯಲ್ಲಿ ₹71 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರರಿಬ್ಬರನ್ನು ಮೇ 16ರಂದು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.