
ನವದೆಹಲಿ: ‘ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹತ್ತಿ ಬೆಳೆಯುವ ರೈತರು ಹಾಗೂ ಜವಳಿ ರಫ್ತುದಾರರಿಗೆ ವಂಚಿಸುತ್ತಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದು, ಒಪ್ಪಂದದಿಂದ ಭಾರತದ ಜವಳಿ ಉದ್ಯಮಿಗಳಿಗೆ ಅಮೆರಿಕವು ಶೇಕಡಾ 18ರಷ್ಟು ಸುಂಕ ವಿಧಿಸಿದರೆ, ಬಾಂಗ್ಲಾದೇಶಕ್ಕೆ ಶೂನ್ಯ ಸುಂಕ ವಿಧಿಸಲಾಗುತ್ತದೆ ಎಂದು ಸಚಿವರು ಉತ್ತರ ನೀಡಿದ್ದಾರೆ. ಭಾರತವು ಅದೇ ಪ್ರಯೋಜವನ್ನು ಪಡೆಯಬೇಕಾದರೆ, ಅಮೆರಿಕದಿಂದ ನಾವು ಹತ್ತಿಯನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ವಿಷಯದ ಬಗ್ಗೆ ಪರಿಣತ ಸುಳ್ಳುಗಾರರಾದ ಪ್ರಧಾನಿ ಹಾಗೂ ಸಂಪುಟದ ಸಚಿವರು ಗೊಂದಲವನ್ನು ಮೂಡಿಸುತ್ತಿದ್ದಾರೆ’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ರಾಹುಲ್ ಆರೋಪದ ಕುರಿತಂತೆ ಮುಂಬೈನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್, ‘ರಾಹುಲ್ ಗಾಂಧಿ ಅಪಕ್ವರಾಗಿದ್ದು, ಆರ್ಥಿಕತೆಯ ಬಗ್ಗೆ ಯಾವುದೇ ಜ್ಞಾನ ಹೊಂದಿಲ್ಲ, ಅವರು ಸತ್ಯದಿಂದ ಸಾವಿರಾರು ಕಿಲೋ ಮೀಟರ್ ದೂರದಲ್ಲಿದ್ದಾರೆ. ಅವರಂತಹ ಅಪಖ್ಯಾತ ಹೊಂದಿದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸೇವೆ ಸಲ್ಲಿಸುವುದನ್ನು ತಡೆಯಲು ಸಾಧ್ಯವಿಲ್ಲ. ತಪ್ಪು ಮಾಹಿತಿ ಹಾಗೂ ದಾರಿ ತಪ್ಪಿಸುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.