ADVERTISEMENT

ಸೇನಾಧಿಕಾರಿಯಿಂದ ದಾಳಿ: ಸ್ಪೈಸ್‌ಜೆಟ್ ಸಿಬ್ಬಂದಿಗೆ ದವಡೆ, ಬೆನ್ನುಮೂಳೆ ಮುರಿತ

ಪಿಟಿಐ
Published 3 ಆಗಸ್ಟ್ 2025, 9:15 IST
Last Updated 3 ಆಗಸ್ಟ್ 2025, 9:15 IST
<div class="paragraphs"><p>ಪ್ರಯಾಣಿಕರೊಬ್ಬರು&nbsp;ಸ್ಪೈಸ್‌ಜೆಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ</p></div>

ಪ್ರಯಾಣಿಕರೊಬ್ಬರು ಸ್ಪೈಸ್‌ಜೆಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ

   

Credit: X/@shukla_tarun

ಶ್ರೀನಗರ: ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಲಗೇಜ್‌ ಕೊಂಡೊಯ್ಯಲು ಶುಲ್ಕ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಮೇಲೆ ಸೇನಾಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆ.

ADVERTISEMENT

ಜುಲೈ 26ರಂದು ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಹಲ್ಲೆ ನಡೆದಿರುವುದನ್ನು ಏರ್‌ಲೈನ್ಸ್‌ ಹಾಗೂ ಪೊಲೀಸ್‌ ಸಿಬ್ಬಂದಿ ಖಚಿತಪಡಿಸಿದ್ದಾರೆ.

ಆಗಿದ್ದೇನು: ‘ಶ್ರೀನಗರದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್‌ ಬುಕ್ಕಿಂಗ್‌ ಮಾಡಿದ್ದ ಸೇನಾಧಿಕಾರಿಯು ತಮ್ಮ ಜೊತೆಗೆ ಎರಡು ಲಗೇಜ್‌ ಬ್ಯಾಗ್‌ಗಳನ್ನು ತಂದಿದ್ದರು. ಇದು ನಿಗದಿಪಡಿಸಿದ 7 ಕೆ.ಜಿ. ತೂಕಕ್ಕಿಂತ ಹೆಚ್ಚು ತೂಕ (16ಕೆ.ಜಿ)  ಹೊಂದಿತ್ತು. ಹೆಚ್ಚುವರಿ ಲಗೇಜ್‌ಗೆ ಶುಲ್ಕ ಪಾವತಿ ಮಾಡುವಂತೆ ಏರ್‌ಲೈನ್ಸ್‌ ಸಿಬ್ಬಂದಿಯು ಸೇನಾಧಿಕಾರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಅವರು, ವಾಯುಯಾನ ಶಿಷ್ಟಾಚಾರಗಳನ್ನು ಉಲ್ಲಂಘಿಸಿ, ಬೋರ್ಡಿಂಗ್‌ ಕಡ್ಡಾಯ ನಿಯಮಗಳನ್ನೂ ಪಾಲಿಸದೇ,  ಬಲವಂತವಾಗಿ ಏರೋಬ್ರಿಡ್ಜ್‌ ಪ್ರವೇಶಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ಯೋಧರು (ಸಿಐಎಸ್‌ಎಫ್‌) ಅವರನ್ನು ಮತ್ತೆ ಬೋರ್ಡಿಂಗ್‌ ದ್ವಾರದತ್ತ ಕರೆತಂದಿದ್ದಾರೆ.

ಈ ವೇಳೆ ಏರ್‌ಲೈನ್ಸ್‌ ಸಿಬ್ಬಂದಿ ಮೇಲೆ ಸೇನಾಧಿಕಾರಿಯು ಮಾತಿನ ಚಕಮಕಿ ನಡೆಸಿ, ದೈಹಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಒಬ್ಬರಿಗೆ ಬೆನ್ನುಮೂಳೆ ಮುರಿದಿದ್ದು, ಮತ್ತೊಬ್ಬರಿಗೆ ದವಡೆಗೆ ತೀವ್ರವಾದ ಗಾಯಗಳಾಗಿವೆ. ಮತ್ತಿಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ವಕ್ತಾರರು ತಿಳಿಸಿದ್ದಾರೆ.

‘ಸ್ಪೈಸ್‌ಜೆಟ್‌ ಒಬ್ಬ ಸಿಬ್ಬಂದಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದರು. ಮತ್ತೊಬ್ಬರ ಮೇಲೆ ಕಾಲಿನಿಂದ ತುಳಿದು, ಹಲ್ಲೆ ನಡೆಸುವುದನ್ನು ಮುಂದುವರಿಸಿದ್ದರು. ಇದರಿಂದ ಅವರ ಮೂಗು, ಬಾಯಿಯಲ್ಲಿ ರಕ್ತ ಸೋರುತ್ತಿತ್ತು’ ಎಂದು ಹೇಳಿದ್ದಾರೆ.

‘ಗಾಯಾಳು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯನ್ನು ಏರ್‌ಲೈನ್ಸ್‌ ಬಲವಾಗಿ ಖಂಡಿಸಿದ್ದು, ಭೀಕರ ಹಿಂಸಾಚಾರದ ಕೃತ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಫ್‌ಐಆರ್‌ ದಾಖಲು: ‘ಹಲ್ಲೆ ಮಾಡಿದ ಅಧಿಕಾರಿ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹುಮ್‌ಹಮಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

‘ಈಗಾಗಲೇ ತನಿಖೆ ಆರಂಭಿಸಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದಿದ್ದು, ಸಿಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ’ ಎಂದು ಹೇಳಿದ್ದಾರೆ.

‘ಅಧಿಕಾರಿಯ ವಿರುದ್ಧ ದೂರು ದಾಖಲಿಸಿದ್ದು, ಸೇನಾಧಿಕಾರಿಯನ್ನು  ‘ನೋ-ಫ್ಲೈ’ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪೈಸ್‌ಜೆಟ್‌ ತಿಳಿಸಿದೆ.
‘ಪ್ರಕರಣ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ಕುರಿತು ಏರ್‌ಲೈನ್ಸ್‌ ಸಿಬ್ಬಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಂತಹ ದಾಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶುಕ್ರವಾರ ಮುಂಬೈನಿಂದ ಕೋಲ್ಕತ್ತಕ್ಕೆ ಹೊರಟಿದ್ದ ವಿಮಾನದಲ್ಲಿ ಸಹ ಪ್ರಯಾಣಿಕರೊಬ್ಬರ ಕಪಾಳಕ್ಕೆ ಹೊಡೆದ ಪ್ರಯಾಣಿಕನಿಗೆ ‘ವಿಮಾನ ಪ್ರಯಾಣದ ಮೇಲೆ ನಿಷೇಧ’ ಹೇರಲಾಗಿದೆ’ ಎಂದು ಇಂಡಿಗೊ ಏರ್‌ಲೈನ್ಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.