ADVERTISEMENT

ಸರ್ಕಾರಗಳನ್ನು ಉರುಳಿಸದೇ ಇದ್ದಿದ್ದರೆ ಹಣದುಬ್ಬರವೇ ಇರುತ್ತಿರಲಿಲ್ಲ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 11:09 IST
Last Updated 27 ಆಗಸ್ಟ್ 2022, 11:09 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌    

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.

ಸರ್ಕಾರಗಳನ್ನು ಉರುಳಿಸದೇ ಹೋಗಿದ್ದಿದ್ದರೆ ದೇಶಕ್ಕೆ ಹಣದುಬ್ಬರವೇ ಎದುರಾಗುತ್ತಿರಲಿಲ್ಲ ಎಂದು ಅವರು ಮಾರ್ಮಿಕವಾಗಿ ಟೀಕೆ ಮಾಡಿದ್ದಾರೆ.

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಕೇಜ್ರಿವಾಲ್‌, ‘ಮೊಸರು, ಮಜ್ಜಿಗೆ, ಜೇನುತುಪ್ಪ, ಗೋಧಿ, ಅಕ್ಕಿ ಮುಂತಾದವುಗಳ ಮೇಲೆ ವಿಧಿಸಿರುವ ಜಿಎಸ್‌ಟಿಯಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ₹7,500 ಕೋಟಿ ಆದಾಯ ಬರುತ್ತದೆ. ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಇಲ್ಲಿಯವರೆಗೆ ₹6,300 ಕೋಟಿ ಖರ್ಚು ಮಾಡಿದೆ. ಈ ಸರ್ಕಾರಗಳು ಉರುಳದೇ ಹೋಗಿದ್ದರೆ ಗೋಧಿ, ಅಕ್ಕಿ, ಮಜ್ಜಿಗೆ ಇತ್ಯಾದಿಗಳ ಮೇಲೆ ಜಿಎಸ್‌ಟಿ ಹೇರಿಕೆಯಾಗುತ್ತಲೇ ಇರಲಿಲ್ಲ. ಜನರು ಹಣದುಬ್ಬರವನ್ನು ಎದುರಿಸಬೇಕಾಗಿರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಪ್ಯಾಕ್ ಮಾಡಲಾದ, ಲೇಬಲ್ ಇರುವ ಆಹಾರ ವಸ್ತುಗಳಾದ ಮಾಂಸ, ಮೀನು, ಮೊಸರು, ಪನ್ನೀರ್ ಮತ್ತು ಜೇನುತುಪ್ಪಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಜೂನ್‌ 28ರಂದು ಕೈಗೊಂಡಿತ್ತು.

ಇನ್ನೊಂದೆಡೆ, ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಮ್‌ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ದೇಶದಲ್ಲಿ ಹಲವು ಸರ್ಕಾರಗಳನ್ನು ಉರುಳಿಸಿರುವ ಬಿಜೆಪಿ ಈ ವರೆಗೆ 277 ಶಾಸಕರನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ, ದೆಹಲಿಯ 40 ಶಾಸಕರ ಖರೀದಿಗೆ ₹800 ಕೋಟಿ ಖರ್ಚು ಮಾಡಲೂ ಬಿಜೆಪಿ ಯೋಜಿಸಿತ್ತು ಎಂದು ಅವರು ದೂರಿದ್ದರು.

ಈ ವಾದ ಸರಣಿಯನ್ನು ಮುಂದುವರಿಸಿರುವ ಕೇಜ್ರಿವಾಲ್‌, ಆಪರೇಷನ್‌ ಕಮಲ, ಹಣದುಬ್ಬರ, ಜಿಎಸ್‌ಟಿಯನ್ನು ಒಟ್ಟೊಟ್ಟಿಗೆ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.