ADVERTISEMENT

ತಮಿಳುನಾಡು: ಆಸಕ್ತ ಮಹಿಳೆಯರಿಗೆ ಪೌರೋಹಿತ್ಯ ತರಬೇತಿ

ದೇವಾಲಯಗಳಲ್ಲಿ ತಮಿಳಿನಲ್ಲಿ ಮಂತ್ರ ಪಠಣಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 14:53 IST
Last Updated 12 ಜೂನ್ 2021, 14:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಅರ್ಚಕರಾಗಲು ಆಸಕ್ತಿ ಹೊಂದಿರುವ ಮಹಿಳೆಯರಿಗೆ ಪೌರೋಹಿತ್ಯ ತರಬೇತಿ ನೀಡಲು ತಮಿಳುನಾಡು ಸರ್ಕಾರ ನಿರ್ಧರಿಸಿದ್ದು, ಅಂಥ ಮಹಿಳೆಯರಿಗೆ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಕ ಮಾಡಲು ಅಗತ್ಯ ಕ್ರಮ ವಹಿಸುವುದಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿನಿಧಿ (ಎಚ್‌ಆರ್ ಮತ್ತು ಸಿಇ) ಸಚಿವ ಪಿ.ಕೆ. ಶೇಖರ್ ಬಾಬು ಶನಿವಾರ ತಿಳಿಸಿದ್ದಾರೆ.

ಮಾನವ ಸಂಪನ್ಮೂಲ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿನಿಧಿ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತರಬೇತಿ ಪಡೆದ ಬ್ರಾಹ್ಮಣೇತರರನ್ನು ತಮಿಳುನಾಡಿನಲ್ಲಿ ಅರ್ಚಕರನ್ನಾಗಿ ನೇಮಕ ಮಾಡಲು ಅವಕಾಶ ಕಲ್ಪಿಸುವ ಸಲುವಾಗಿ 2006ರಲ್ಲಿ ದಿ.ಎಂ. ಕರುಣಾನಿಧಿ ನೇತೃತ್ವದ ಸರ್ಕಾರವು ಅಂಗೀಕರಿಸಿದ ಸರ್ಕಾರಿ ಆದೇಶವನ್ನು ಜಾರಿಗೆ ತರಲು ಡಿಎಂಕೆ ಸರ್ಕಾರವು ಬದ್ಧವಾಗಿದೆ’ ಎಂದೂ ಹೇಳಿದ್ದಾರೆ.

‘ಈ ನಿಟ್ಟಿನಲ್ಲಿ ಅರ್ಚಕರಾಗಲು ಆಸಕ್ತಿ ಹೊಂದಿರುವ ಮಹಿಳೆಯರಿಗೆ ತರಬೇತಿ ನೀಡಲು ಮತ್ತು ಅವರನ್ನು ಅರ್ಚಕರನ್ನಾಗಿ ನೇಮಿಸಲು ಬಯಸುತ್ತೇವೆ. ಈ ಕುರಿತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಬಳಿಗೆ ಪ್ರಸ್ತಾಪ ಮುಂದಿಟ್ಟು ಅಗತ್ಯ ಅನುಮೋದನೆಗಳನ್ನು ಪಡೆಯುತ್ತೇವೆ’ ಎಂದೂ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

ADVERTISEMENT

‘ಸರ್ಕಾರಿ ನಿಯಂತ್ರಣದಲ್ಲಿರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಸಂಸ್ಕೃತದ ಬದಲು ತಮಿಳು ಭಾಷೆಯಲ್ಲಿ ಪೂಜೆಗಳು ಮತ್ತು ಆಚರಣೆಗಳು ನಡೆಸುವಂತೆ ಮತ್ತು ಸಂಸ್ಕೃತ ಬದಲು ತಮಿಳಿನಲ್ಲಿ ಮಂತ್ರ ಪಠಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಈಗ 47 ಎ ಪಟ್ಟಿಯ ದೇವಾಲಯಗಳಿವೆ. ಇಲ್ಲಿ ತಮಿಳಿನಲ್ಲಿ ಪೂಜೆ ಮಾಡುವ ಅರ್ಚಕರ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಶೇಖರ್ ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.