ADVERTISEMENT

ಬಿಜೆಪಿಯೇ ಮನರಂಜನೆ ನೀಡುತ್ತಿದೆ; ಚಿತ್ರಮಂದಿರ ಏಕೆ ತೆರೆಯಬೇಕು–ಶಿವಸೇನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 10:38 IST
Last Updated 26 ಸೆಪ್ಟೆಂಬರ್ 2021, 10:38 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ‘ವಿರೋಧಪಕ್ಷ ಬಿಜೆಪಿಯೇ ರಾಜ್ಯದಲ್ಲಿ ಜನರಿಗೆ ಮನರಂಜನೆ ನೀಡುತ್ತಿರುವಾಗ ಕೋವಿಡ್‌ ಪಿಡುಗಿನ ಈ ಹೊತ್ತಿನಲ್ಲಿ ಮನರಂಜನೆಗಾಗಿ ಸಿನಿಮಾ, ರಂಗಮಂದಿರಗಳನ್ನು ತೆರೆಯುವ ಅಗತ್ಯವೇನು’ ಎಂದು ಶಿವಸೇನೆಯು ಪ್ರಶ್ನಿಸಿದೆ.

ಕೋವಿಡ್‌ ಮಾರ್ಗಸೂಚಿಗಳ ಪಾಲಿಸುವ ನಿಬಂಧನೆಯೊಂದಿಗೆ ಅ.22ರಿಂದ ಚಿತ್ರಮಂದಿರಗಳು, ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪ್ರಕಟಿಸಿದ್ದರು.

ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿನ ‘ರೋಖ್‌ಥೋಕ್‌’ ಅಂಕಣದಲ್ಲಿ ಇದನ್ನು ಉಲ್ಲೇಖಿಸಿರುವ ಶಿವಸೇನೆ ಸಂಸದ, ಕಾರ್ಯನಿರ್ವಾಹಕ ಸಂಪಾದಕ ಸಂಜಯ್‌ ರಾವುತ್‌, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಬಿಜೆಪಿ ನಾಯಕ ಕಿರಿತ್‌ ಸೋಮಯ್ಯ ಅವರು ಪ್ರತಿದಿನ ರಾಜ್ಯದ ವಿವಿಧ ಮಂತ್ರಿಗಳ ವಿರುದ್ಧ ಆರೋಪ ಹೊರಿಸುತ್ತಾರೆ. ಬಳಿಕ ಅವರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಅವರ ಆರೋಪಗಳು ಸಾಬೂನಿನ ಗುಳ್ಳೆಗಳಂತೆ’ ಎಂದು ವ್ಯಂಗ್ಯವಾಡಿದ್ದಾರೆ.

‘ದೇಶದಲ್ಲಿ ಕೋವಿಡ್‌ ನಿರ್ಬಂಧಗಳು ಮುಂದುವರೆದಿದ್ದರೂ ರಾಜಕೀಯ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ಮನರಂಜನೆ ಇದೆ. ವಿರೋಧ ಪಕ್ಷಗಳ ಈ ಮನರಂಜನೆಯಲ್ಲಿ ಹಾಸ್ಯ ಮತ್ತು ಕೌತುಕವಿದೆ’ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ವಿರೋಧಪಕ್ಷ ಎಂಬುದು ಕೇವಲ ಕಾಮಿಡಿ ಷೋ ಆಗಿದೆ. ಇ.ಡಿ ವಿಚಾರಣೆ, ವ್ಯಕ್ತಿತ್ವದ ಹರಣ ಹೊರತುಪಡಿಸಿ ಬೇರೇನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.