ADVERTISEMENT

ಗಾಂಧೀಜಿ ಜೊತೆಗೂ ಬೌದ್ಧಿಕ ಸಂಘರ್ಷ ನಡೆಸಿದ್ದ ಜವಹರಲಾಲ್ ನೆಹರೂ

‘ನೆಹರೂ: ದ ಡಿಬೇಟ್ಸ್ ದಟ್‌ ಡಿಫೈನ್ಡ್ ಇಂಡಿಯಾ’ ನೂತನ ಕೃತಿಯಲ್ಲಿ ಉಲ್ಲೇಖ

ಪಿಟಿಐ
Published 21 ನವೆಂಬರ್ 2021, 14:35 IST
Last Updated 21 ನವೆಂಬರ್ 2021, 14:35 IST
ಜವಹರಲಾಲ್ ನೆಹರೂ
ಜವಹರಲಾಲ್ ನೆಹರೂ   

ನವದೆಹಲಿ: ‘ಜವಹರಲಾಲ್ ನೆಹರೂ ಅವರು ತಮ್ಮ ಚಿಂತನೆಗಳಿಗೆ ಸಂಬಂಧಿಸಿ ರಾಜಕೀಯ ಪ್ರಮುಖರ ಜೊತೆಆಗಾಗ್ಗೆ ಬಿಸಿ ಚರ್ಚೆ ನಡೆಸಿ ವಿಚಾರ ಸ್ಪಷ್ಟಪಡಿಸುತ್ತಿದ್ದರು. ಬೌದ್ಧಿಕ ಸಂಘರ್ಷದ ಈ ಪ್ರಕ್ರಿಯೆಯಲ್ಲಿ ಮಹಾತ್ಮಗಾಂಧಿ ಅವರನ್ನೂ ಬಿಟ್ಟಿರಲಿಲ್ಲ’.

ತ್ರಿಪುರ್ದಮನ್ ಸಿಂಗ್ ಮತ್ತು ಅದೀಲ್ ಹುಸೇನ್ ಅವರು ರಚಿಸಿರುವ ‘ನೆಹರೂ: ದ ಡಿಬೇಟ್ಸ್ ದಟ್‌ ಡಿಫೈನ್ಡ್ ಇಂಡಿಯಾ’ ಶೀರ್ಷಿಕೆಯ ನೂತನ ಪುಸ್ತಕದಲ್ಲಿ ಈ ಅಂಶ ವ್ಯಕ್ತವಾಗಿದೆ.

ರಾಜಕೀಯ ಪ್ರತಿಸ್ಪರ್ಧಿಗಳಲ್ಲದ, ಸಮಕಾಲೀನರಾದ ರಾಜಕೀಯ ಮತ್ತು ಬೌದ್ಧಿಕ ಚಿಂತಕರ ಜೊತೆಗೆ ವೇದಿಕೆಯನ್ನು ಹಂಚಿಕೊಂಡ ಸಂದರ್ಭದಲ್ಲಿಯೂ ನೆಹರೂ ಅವರು ಇಂತಹ ಬಿಸಿ ಚರ್ಚೆಗೆ ಮುಂದಾಗುತ್ತಿದ್ದರು ಎಂದು ಕೃತಿಕಾರರು ತಿಳಿಸಿದ್ದಾರೆ.

ADVERTISEMENT

ಆಲ್ ಇಂಡಿಯಾ ಮುಸ್ಲಿಂ ಲೀಗ್‌ ಮುಖ್ಯಸ್ಥರಾಗಿದ್ದ ಮೊಹಮ್ಮದ್‌ ಅಲಿ ಜಿನ್ನಾ, ಹಿಂದೂ ಮಹಾಸಭಾದ ಶ್ಯಾಂ ಪ್ರಸಾದ್ ಮುಖರ್ಜಿ ಅಂತಹ ರಾಜಕೀಯ ಪ್ರತಿಸ್ಫರ್ಧಿಗಳು ಹಾಗೂ ಕಾಂಗ್ರೆಸ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್ ಸೇರಿದಂತೆತಮ್ಮ ಚಿಂತನೆಯನ್ನು ಒಪ್ಪದ ಸಹೋದ್ಯೋಗಿಗಳಿಗೆ ವಿಷಯವನ್ನು ಮನದಟ್ಟು ಮಾಡಿಕೊಡಲೂ ಇಂತಹ ವಾದಕ್ಕೆ ಮುಂದಾಗುತ್ತಿದ್ದರು ಎಂದು ತಿಳಿಸಿದೆ.

‘ಬ್ರಿಟೀಷರೇ ದೇಶ ಬಿಟ್ಟು ತೊಲಗಿ’ ಚಳವಳಿ ಕುರಿತು ನೆಹರೂ ಜೊತೆಗೆ ನಡೆದಿದ್ದ ವಾದ ಉಲ್ಲೇಖಿಸಿ ಗಾಂಧೀಜಿ ಅವರು ಒಮ್ಮೆ ವೈಸ್‌ರಾಯ್ ಲಾರ್ಡ್ ಲಿಲ್‌ನಿತ್‌ಗೊ ಅವರಿಗೆ, ‘ಬರುವ ದಿನಗಳಲ್ಲಿ ವಾದ ಮಾಡುವ ಸಾಮರ್ಥ್ಯ ನೆಹರೂಗಿದೆ’ ಎಂದು ತಿಳಿಸಿದ್ದರು.

ಇಂತಹ ಬೌದ್ಧಿಕ ಸಂಘರ್ಷದಲ್ಲಿ ಅವರು ಮಹಾತ್ಮಗಾಂಧಿ ಅವರನ್ನು ಬಿಟ್ಟಿರಲಿಲ್ಲ. ಆದರೆ, ಮಾರ್ಗದರ್ಶಕರಾಗಿದ್ದ ಗಾಂಧೀಜಿ ಅವರೊಂದಿಗೆ ಬಹಿರಂಗವಾಗಿ ಸಂಘರ್ಷಕ್ಕೆ ಇಳಿಯುವುದಿಂದ ನುಣುಚಿಕೊಳ್ಳುತ್ತಿದ್ದರು ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಕೃತಿಯನ್ನು ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಾಶನ ಸಂಸ್ಥೆ ಹೊರತಂದಿದೆ. ಕವಿ, ಚಿಂತಕ ಮಹಮ್ಮದ್ ಇಕ್ಬಾಲ್, ಜಿನ್ನಾ, ಸರ್ದಾರ್‌ ಪಟೇಲ್, ಮುಖರ್ಜಿ ಅವರೊಂದಿಗೆ ನಡೆಸಿದ ಚರ್ಚೆಯ ಉಲ್ಲೇಖವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.