ADVERTISEMENT

ಸಲಿಂಗ ವಿವಾಹದ ಕಾನೂನು ಮಾನ್ಯತೆಗೆ ವಿರೋಧಿಸಿದ ಕೇಂದ್ರದ ನಡೆಗೆ ಚೇತನ್‌ ಆಕ್ಷೇಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2023, 14:29 IST
Last Updated 12 ಮಾರ್ಚ್ 2023, 14:29 IST
ನಟ ಚೇತನ್
ನಟ ಚೇತನ್   

ಬೆಂಗಳೂರು: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರದ ನಡೆಗೆ ನಟ ಚೇತನ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲಿಂಗಿ ದಂಪತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭಾನುವಾರ ಅಫಿಡವಿಟ್‌ ಸಲ್ಲಿಸಿದೆ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದನ್ನು ವಿರೋಧಿಸಿರುವ ಸರ್ಕಾರ, ಸಲಿಂಗ ಸಂಬಂಧಗಳು ಮತ್ತು ಭಿನ್ನಲಿಂಗೀಯ ಸಂಬಂಧಗಳು ಸ್ಪಷ್ಟವಾಗಿ ವಿಭಿನ್ನ ಎಂದು ಹೇಳಿದೆ. ಅವುಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ.

ADVERTISEMENT

ಸಲಿಂಗಿಗಳು ಸಹಜೀವನ ನಡೆಸುವುದು, ಲೈಂಗಿಕ ಸಂಬಂಧವನ್ನು ಹೊಂದಿರುವುದನ್ನು ಭಾರತೀಯ ಕೌಟುಂಬಿಕ ವ್ಯವಸ್ಥೆಯೊಂದಿಗೆ ಹೋಲಿಸಲಾಗುವುದಿಲ್ಲ. ಇದರಲ್ಲಿ ಜೈವಿಕ ಪುರುಷನು 'ಪತಿ'ಯಾದರೆ, ಜೈವಿಕ ಮಹಿಳೆ 'ಹೆಂಡತಿ'ಯಾಗಿರುತ್ತಾಳೆ’ ಎಂದು ಪ್ರತಿಪಾದಿಸಿದೆ.

ಕೇಂದ್ರದ ಈ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿರುವ ಚೇತನ್‌ ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸರ್ಕಾರವು ಸಲಿಂಗ ವಿವಾಹದ ಕಾನೂನನ್ನು ವಿರೋಧಿಸಿದೆ. ಮದುವೆಯು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವಿನ ಕೌಟುಂಬಿಕ ವ್ಯವಸ್ಥೆ ಎಂದು ಹೇಳಿದೆ. ‌ಇದು ಅಸಂವಿಧಾನಿಕ ಮತ್ತು ಸಾಂಸ್ಥಿಕ ತಾರತಮ್ಯ. ಎಲ್ಲಾ ನಾಗರಿಕರಂತೆ ಎಲ್‌ಜಿಬಿಟಿಕ್ಯು+ ಸಮುದಾಯಕ್ಕೂ ಸಮಾನ ಹಕ್ಕುಗಳನ್ನು ನೀಡಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.