ಬೆಂಗಳೂರು: ನಿಯಮಗಳ ಪ್ರಕಾರ ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ಜನಪ್ರತಿನಿಧಿಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಈ ಕುರಿತು ತನ್ನ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಾನಸಿಕ ಅನಾರೋಗ್ಯ ಹೊಂದಿದವರು ಚುನಾಯಿತ ಪ್ರತಿನಿಧಿಗಳ ಸ್ಥಾನದಲ್ಲಿರಲು ಅನರ್ಹರು ಎಂಬ ನಿಯಮವಿದೆ. ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಕಾರಣ ಕೆ.ಎಸ್ ಈಶ್ವರಪ್ಪ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ. ನಿಯಮದ ಪ್ರಕಾರ ಅವರನ್ನು ಜನಪ್ರತಿನಿಧಿಯ ಸ್ಥಾನದಿಂದ ಅನರ್ಹಗೊಳಿಸಬೇಕು,‘ ಎಂದು ವ್ಯಂಗ್ಯವಾಡಿದೆ.
ಕನ್ನಡಿಗರ ಸಭ್ಯತನಕ್ಕೆ ಈಶ್ವರಪ್ಪನವರು ಅತೀ ದೊಡ್ಡ ಕಳಂಕ ಎಂದೂ ಕಾಂಗ್ರೆಸ್ ಮೂದಲಿಸಿದೆ.
ಬಿಜೆಪಿ ಕಾರ್ಯಕರ್ತರು ಒಂದು ಏಟಿನ ಬದಲಿಗೆ ಎರಡು ಏಟು ಕೊಡಬೇಕು ಎಂದು ಹೇಳಿದ್ದ ಕೆ.ಎಸ್ ಈಶ್ವರಪ್ಪ ಅವರು, ತಮ್ಮ ಮಾತನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ‘ಈಶ್ವರಪ್ಪ ತಮ್ಮ ಹೆಸರನ್ನು ‘ಮೇರಾ ನಾಮ್ ಜೋಕರ್’ ಎಂದು ಬದಲಾಯಿಸಿಕೊಳ್ಳಲಿ’ ಎಂದು ಗೇಲಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಈಶ್ವರಪ್ಪ, ಕಾಂಗ್ರೆಸ್ಸಿಗರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಈಶ್ವರಪ್ಪ ಅವರನ್ನು ಟೀಕಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.